ಹುಬ್ಬಳ್ಳಿ: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅಗಲಿಕೆ ಬಳಿಕ ನಾಲ್ವರಿಗೆ ಅವರ ನೇತ್ರದಾನ ಮಾಡಿ, ದೃಷ್ಟಿ ನೀಡಲಾಗಿತ್ತು. ಇದೀಗ ಪುನೀತ್ ಅನುಪಸ್ಥಿತಿಯಲ್ಲಿ ನಡೆಯಲಿರುವ ಪ್ರಪ್ರಥಮ ಜನ್ಮದಿನವಾದ ಮಾ. 17ರಂದು ಹುಬ್ಬಳ್ಳಿಯಲ್ಲಿ ‘ಅಪ್ಪು ಬೆಳಕು’ ಎಂಬ ಬೃಹತ್ ನೇತ್ರದಾನ ವಾಗ್ದಾನ ಶಿಬಿರ ನಡೆಯಲಿದೆ.
ಕನ್ನಡದ ನಂ. 1 ಪತ್ರಿಕೆ ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿ, ಹುಬ್ಬಳ್ಳಿಯ ಮೂರುಸಾವಿರ ಮಠಗಳ ಸಹಯೋಗ ಮತ್ತು ರಜತ ಉಳ್ಳಾಗಡ್ಡಿಮಠ ಅವರ ನೇತೃತ್ವದಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ನೇತ್ರದಾನ ವಾಗ್ದಾನ ಹಮ್ಮಿಕೊಳ್ಳಲಾಗಿದೆ.
ಪುನೀತ್ ರಾಜಕುಮಾರ ಅವರ 47ನೇ ಹುಟ್ಟುಹಬ್ಬದ ಪ್ರಯುಕ್ತ ಹುಬ್ಬಳ್ಳಿಯ ಮೂರುಸಾವಿರ ಮಠದ ಆವರಣದಲ್ಲಿ ಮಾ.17ರಂದು ಬೆಳಗ್ಗೆ 10 ಗಂಟೆಯಿಂದ ‘ಅಪ್ಪು ಬೆಳಕು’ ನೇತ್ರದಾನ ಶಿಬಿರ ಆಯೋಜಿಸಲಾಗಿದೆ. ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಮಂದಿ ದೃಷ್ಟಿಹೀನರಿದ್ದು, ಅಂಥವರ ಬಾಳಲ್ಲಿ ಬೆಳಕು ಮೂಡಿಸಲು ಅಪ್ಪು ಬೆಳಕು ನೇತ್ರದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಮೂರುಸಾವಿರ ಮಠದ ಶ್ರೀಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ನೇತ್ರದಾನ ವಾಗ್ದಾನ ಮಾಡಲಿದ್ದಾರೆ ವಿಜಯಾನಂದ ಹೀರೋ
ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಚಲನಚಿತ್ರವು ವಿಆರ್ಎಲ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ಈ ಚಿತ್ರದ ನಾಯಕ, ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟ ನಿಹಾಲ್ ಕೂಡ ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ನೇತ್ರದಾನ ವಾಗ್ದಾನ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: PHOTOS| ವಿಜಯಾನಂದ ಸಿನಿಮಾ ಮುಹೂರ್ತ ಕಾರ್ಯಕ್ರಮದ ಕಲರ್ಫುಲ್ ಫೋಟೋ ಝಲಕ್
ಅಂದಾಜು ಒಂದು ಸಾವಿರ ಜನ ನೇತ್ರದಾನ ವಾಗ್ದಾನ ಮಾಡುವ ಭರವಸೆ ಇದೆ. ಮರಣದ ನಂತರ ಕಣ್ಣುಗಳನ್ನು ಮಣ್ಣಾಗಿಸದೆ ಅಗತ್ಯ ಇರುವವವರಿಗೆ ಬೆಳಕು ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆಯುವ ಉದ್ದೇಶದಿಂದ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಜನ ತಮ್ಮ ನೇತ್ರದಾನ ವಾಗ್ದಾನ ಮಾಡುವಂತೆ ಸಾಮಾಜಿಕ ಕಾರ್ಯಕರ್ತ ರಜತ ಉಳ್ಳಾಗಡ್ಡಿಮಠ ಮನವಿ ಮಾಡಿದ್ದಾರೆ. ಈ ಮಹತ್ಕಾರ್ಯಕ್ಕೆ ರಜತ ಉಳ್ಳಾಗಡ್ಡಿಮಠ ಫೌಂಡೇಷನ್, ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ಸುದ್ದಿವಾಹಿನಿ, ಮೂರುಸಾವಿರ ಮಠದ ವಿದ್ಯಾವರ್ಧಕ ಸಂಘ ಸೇರಿ ಅನೇಕ ಸಂಘ-ಸಂಸ್ಥೆಗಳು ಕೈಜೋಡಿಸಿವೆ.
ವಿಜಯಾನಂದ ಮುಹೂರ್ತ ಸಂಭ್ರಮ: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲ್ಯಾಪ್
ವಿಜಯಾನಂದ ಚಿತ್ರ ಕುರಿತು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡ ಡಾ. ವಿಜಯ ಸಂಕೇಶ್ವರ