More

    ಕರೊನಾ ಪ್ರಯೋಗಾಲಯಕ್ಕೆ ಅನುದಾನ

    ಕರೊನಾ ಪ್ರಯೋಗಾಲಯಕ್ಕೆ ಅನುದಾನ

    ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ ಕರೊನಾ ಪ್ರಯೋಗಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ 148.62 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, ಕಳೆದ ಒಂದೂವರೆ ತಿಂಗಳಲ್ಲಿ ಚಿಗುರೊಡೆದಿದ್ದ ಆಕಾಂಕ್ಷೆಯೊಂದು ಈಡೇರಿದಂತಾಗಿದೆ.

    ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಈ ಮಾಹಿತಿ ನೀಡಿದ್ದು, ತಕ್ಷಣ ಈ ಅನುದಾನ ಉಪಯೋಗಿಸಿಕೊಂಡು ಪ್ರಯೋಗಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

    ಮೇನಲ್ಲೇ ಜಿಲ್ಲಾಡಳಿತದ ಮಟ್ಟದಲ್ಲಿ ಪ್ರಯೋಗಾಲಯ ಸ್ಥಾಪಿಸುವ ಕುರಿತು ಸಮಾಲೋಚನೆ ನಡೆದು ಸಚಿವ ಸಿ.ಟಿ.ರವಿ ಸರ್ಕಾರದ ಗಮನ ಸೆಳೆದಿದ್ದರಲ್ಲದೆ, ಎಸ್​ಆರ್​ಎಫ್​ನಡಿ ತುರ್ತಾಗಿ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಖುದ್ದಾಗಿ ಕಂದಾಯ ಸಚಿವರಿಗೆ ಮನವಿ ಮಾಡಿದ್ದರು. ಜಿಲ್ಲಾಧಿಕಾರಿಯೂ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

    ಹಸಿರುವಲಯದಲ್ಲೇ ಇದ್ದ ಅಕ್ಕಪಕ್ಕದ ಜಿಲ್ಲೆಗಳಾದ ಹಾಸನ ಹಾಗೂ ಶಿವಮೊಗ್ಗದಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಈ ಜಿಲ್ಲೆಗೂ ಆತಂಕ ಕಾಡತೊಡಗಿತು. ಜಿಲ್ಲೆಗೆ ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ನಗರದಲ್ಲಿ ಕರೊನಾ ಪ್ರಯೋಗಾಲಯ ಆರಂಭಿಸಬೇಕೆನ್ನುವ ಒತ್ತಡ ಹೆಚ್ಚಾಗತೊಡಗಿತು. ಸೋಂಕು ಇನ್ನಷ್ಟು ಹರಡಬಹುದೆಂಬ ಆತಂಕ ತಲೆದೋರಿದ್ದರಿಂದ ಜಿಲ್ಲಾಡಳಿತ ರ್ಯಾಂಡಮ್ ಪರೀಕ್ಷೆ ಪ್ರಮಾಣ ಹೆಚ್ಚಿಸಿತ್ತು. ಜತೆಯಲ್ಲೇ ಈ ಮಾದರಿಗಳ ಪರೀಕ್ಷಾ ವರದಿ ಹೆಚ್ಚಿನ ಪ್ರಮಾಣದಲ್ಲಿ ಹಾಸನ ಹಾಗೂ ಶಿವಮೊಗ್ಗಕ್ಕೆ ಕಳುಹಿಸುವುದು ಅನಿವಾರ್ಯವಾಯಿತು.

    ಸ್ಥಳೀಯವಾಗಿ ಆ ಎರಡೂ ಜಿಲ್ಲೆಗಳಲ್ಲಿ ಒತ್ತಡ ಹೆಚ್ಚಾಗತೊಡಗಿದ್ದರಿಂದ ಜಿಲ್ಲೆಯ ವರದಿಗಳ ಫಲಿತಾಂಶ ಲಭ್ಯವಾಗುವುದು ವಿಳಂಬವಾಗತೊಡಗಿತು. ಪರೀಕ್ಷಾ ಪ್ರಕರಣಗಳು ಬಾಕಿ ಉಳಿಯುತ್ತಲೇ ಇದ್ದುದು ಜಿಲ್ಲಾಡಳಿತಕ್ಕೂ ಸಮಸ್ಯೆಯಾಗಿತ್ತು.

    ಕ್ವಾರಂಟೈನ್​ನಲ್ಲಿ ಉಳಿದಿದ್ದು 35 ಮಂದಿ: ಲಾಕ್​ಡೌನ್ ಸಡಿಲಿಸಿದ ಬಳಿಕ ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ 608 ಜನರಲ್ಲಿ 573 ಮಂದಿ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಬಿಡುಗಡೆ ಹೊಂದಿದ್ದಾರೆ. ಕೇವಲ 35 ಮಂದಿ ಕ್ವಾರಂಟೈನ್​ನಲ್ಲಿ ಉಳಿದಿದ್ದಾರೆ.

    ನಗರದ ಬೇಲೂರು ರಸ್ತೆ ಮೆಟ್ರಿಕ್ ನಂತರದ ಹಾಸ್ಟೆಲ್​ನಲ್ಲಿ ಆರು ಮಂದಿ, ಮೂಡಿಗೆರೆಯ ಬಿದರಳ್ಳಿ ಮುರಾರ್ಜಿ ದೇಸಾಯಿ ಹಾಸ್ಟೆಲ್​ನಲ್ಲಿ ಒಬ್ಬರು ಹಾಗೂ ಹೋಮ್ ಕ್ವಾರಂಟೈನ್​ನಲ್ಲಿ 28 ಮಂದಿ ಇದ್ದಾರೆ. ನಗರದ ಹೋಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿದ್ದ 37 ಜನರು ಹೋಮ್ ಕ್ವಾರಂಟೈನ್​ನಲ್ಲಿ 55 ಜನರು ಹಾಗೂ ಜಿಲ್ಲೆಯ 12 ವಿವಿಧ ಹಾಸ್ಟೆಲ್​ಗಳಲ್ಲಿ ಕ್ವಾರಂಟೈನ್​ನಲ್ಲಿದ್ದ ಎಲ್ಲರೂ ಸೇರಿ ಒಟ್ಟು 573 ಜನರನ್ನು ಅವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್ ಮಾಹಿತಿ ನೀಡಿದ್ದಾರೆ.

    ಹೋದವರು 1190, ಬಂದವರು 7232: ಹೊರ ಜಿಲ್ಲೆಗಳಿಂದ ಮೇ 3 ರಿಂದ ಜೂ.1ರವರೆಗಿನ ಅವಧಿಯಲ್ಲಿ ಜಿಲ್ಲೆಗೆ 1190 ಮಂದಿ ಆಗಮಿಸಿದ್ದು, ಅವರಲ್ಲಿ ಬೆಂಗಳೂರಿನಿಂದ 934 ಮಂದಿ ಬಂದಿದ್ದು, ಅವರ ಆರೋಗ್ಯದ ಬಗ್ಗೆ ನಿಗಾ ಇಡಲಾಗಿದೆ.

    ಮೇ 22ರಿಂದ ಜೂ.3 ರವರೆಗೆ ಒಟ್ಟು 13 ಮಂದಿ ವಿದೇಶಗಳಿಂದ ಆಗಮಿಸಿದ್ದಾರೆ. ಈ ಪೈಕಿ ದುಬೈನಿಂದ ಆರು, ಯುಕೆನಿಂದ ಮೂವರು, ಸೌದಿ ಅರೇಬಿಯಾದಿಂದ ಇಬ್ಬರು, ಸಿಂಗಾಪುರ ಹಾಗೂ ಯುಎಇಯಿಂದ ತಲಾ ಒಬ್ಬರು ಆಗಮಿಸಿದ್ದಾರೆ. ಇವರೆಲ್ಲರೂ ಹೋಮ್ ಕ್ವಾರಂಟೈನ್​ನಲ್ಲಿದ್ದರು.

    ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಲು ಇನ್ನೂ 17 ಮಂದಿ ಕಾಯುತ್ತಿದ್ದಾರೆ. ಸೇವಾ ಸಿಂಧುವಿನಲ್ಲಿ ಅನುಮತಿ ಕೋರಿ ಅವರು ಅರ್ಜಿ ಸಲ್ಲಿಸಿದ್ದು, ಜಿಲ್ಲಾಡಳಿತ ಇನ್ನೂ ಅನುಮತಿ ನೀಡಿಲ್ಲ ಎಂದು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts