ಕಳಸ: ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ಕೆಲ ವರ್ಷಗಳಿಂದ ವೈದ್ಯರಿಲ್ಲದೆ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಇಲ್ಲದಂತಾಗಿದೆ. ಒಂದೆಡೆ ಜಾನುವಾರುಗಳನ್ನು ಸಾಕಿ ಎನ್ನುವ ಪಶು ಇಲಾಖೆ ಜಾನುವಾರು ಸಾಕಣೆಗೆ ಸೂಕ್ತ ಸೌಲಭ್ಯ ನೀಡುತ್ತಿಲ್ಲ ಎಂದು ಮಂಗಳವಾರ ಕಳಸ ಗ್ರಾಪಂನಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ದೂರಿದರು.
ಪಟ್ಟಣದಲ್ಲಿ ನೂರಾರು ಬಿಡಾಡಿ ಜಾನುವಾರುಗಳು ರಸ್ತೆ ಮತ್ತಿರಕಡೆ ನಿಂತು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿವೆ. ಪಶು ಇಲಾಖೆ ಬಿಡಾಡಿ ಜಾನುವಾರುಗಳ ಸರ್ವೇ ನಡೆಸಬೇಕು ಹಾಗೂ ಪಶು ಇಲಾಖೆಗೆ ಕೂಡಲೇ ವೈದ್ಯರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಕಳಸದ ಯಾವುದೇ ವಸತಿ ನಿಲಯಗಳಲ್ಲೂ ಮೇಲ್ವಿಚಾರಕರಿಲ್ಲದೆ ತೊಂದರೆ ಉಂಟಾಗಿದ್ದು, ಕೂಡಲೇ ಮೇಲ್ವಿಚಾರಕರ ಹುದ್ದೆ ಯನ್ನು ಭರ್ತಿ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಮನ ಸೆಳೆದರು. ಮೇಲ್ವಿಚಾರಕರ ಹುದ್ದೆ ಭರ್ತಿಗೆ ಶಾಸಕರ ಗಮನಕ್ಕೆ ತರಲಾಗಿದೆ ಎಂದು ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಸೋಮಶೇಖರ್ ತಿಳಿಸಿದರು.
ಕಳಸ ಸಮುದಾಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸ ಬೇಕು ಹಾಗೂ ಇಲ್ಲಿಗೆ ಕಾಯಂ ವೈದ್ಯರನ್ನು ನೇಮಿಸಬೇಕು. ಇಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಬೇರೆ ಸಿಬ್ಬಂದಿ ನೇಮಕ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಕಲ್ಮಕ್ಕಿ ಗ್ರಾಮದಲ್ಲಿ ನಿರಂತರ ವಿದ್ಯುತ್ ನಿಲುಗಡೆಯಾಗುತ್ತಿದ್ದು, ನಮಗೆ ಪಟ್ಟಣದ ಮುಖ್ಯ ಲೈನ್ನಿಂದಲೇ ವಿದ್ಯುತ್ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಮರದ ಕೊಂಬೆಗಳು ಬಿದ್ದು ವಿದ್ಯುತ್ ನಿಲುಗಡೆಯಾಗುತ್ತಿದೆ ಎಂದು ಮೆಸ್ಕಾಂ ಸಿಬ್ಬಂದಿ ಉತ್ತರಿಸಿದರು. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ನೀವು ಬೇಸಿಗೆಯಲ್ಲಿ ಏಕೆ ಜಂಗಲ್ ಕಟಿಂಗ್ ಮಾಡುವುದಿಲ್ಲ. ಜಂಗಲ್ ಕಟಿಂಗ್ ಮಾಡಿದ್ದರೆ ವಿದ್ಯುತ್ ಸಮಸ್ಯೆಯಾಗುತ್ತಿರಲಿಲ್ಲ ಎಂದರು.
ಸಾಲಿನಮಕ್ಕಿಯಲ್ಲಿ ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆದ ಕಾಂಕ್ರೀಟ್ ರಸ್ತೆ ಕಾಮಗಾರಿ ತೀರಾ ಕಳಪೆಯಾಗಿದೆ ಎಂದು ಸಾಲಿನಮಕ್ಕಿ ಗ್ರಾಮಸ್ಥರು ಆರೋಪಿಸಿದರು. ಕಾಮಗಾರಿಗೆ ಯಾವುದೇ ಹಣ ಪಾವತಿ ಮಾಡಿಲ್ಲ. ಕಾಮಗಾರಿ ಸರಿಯಾಗಿ ಮಾಡಿದ ಮೇಲೆ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗುತ್ತದೆ ಎಂದು ಇಂಜಿನಿಯರ್ ನಟರಾಜ್ ಉತ್ತರಿಸಿದರು.
ಕಳಸ ಗ್ರಾಪಂ ಅಧ್ಯಕ್ಷೆ ಸುಜಯಾ ಸದಾನಂದ, ನೋಡೆಲ್ ಅಧಿಕಾರಿ ಸೋಮಶೇಖರ್, ಪಿಡಿಒ ಕವೀಶ್, ಗ್ರಾಪಂ ಸದಸ್ಯರಾದ ರಂಗನಾಥ್, ಕಾರ್ತಿಕ್ ಶಾಸಿ, ಸಂತೋಷ್ ಹಿನಾರಿ, ವೀರೇಂದ್ರ, ಮುಖಂಡರಾದ ಗೋಪಾಲ ಶೆಟ್ಟಿ, ಲಕ್ಷ್ಮಣಾಚಾರ್, ಸವಿಂಜಯ, ರಿಜ್ವನ್ ಇದ್ದರು.