ಬೆಳಗಾವಿ: ಮಹಾನಗರ ಪಾಲಿಕೆ ಮತ್ತು ಕಂಟೋನ್ಮೆಂಟ್ ಪ್ರದೇಶ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ನಿರ್ಲಕ್ಷೃದಿಂದ ಬೆಳಗಾವಿ ನಗರವೀಗ ರಸ್ತೆ, ಚರಂಡಿ, ತ್ಯಾಜ್ಯ ಹಾಗೂ ಪಾರ್ಕಿಂಗ್ ಅವ್ಯವಸ್ಥೆಯಿಂದ ತತ್ತರಿಸುತ್ತಿದೆ.
ನಗರದಲ್ಲಿ ಮಳೆ ಬಂದರೆ ಸಾಕು ಚರಂಡಿ ತುಂಬಿ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಮತ್ತೊಂದೆಡೆ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳು, ಅವೈಜ್ಞಾನಿಕ ಹಂಪ್ಸ್, ರಸ್ತೆ ಮಧ್ಯದಲ್ಲೇ ವಾಹನ ನಿಲುಗಡೆಯಿಂದ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದ್ದರೂ ಪಾಲಿಕೆ, ಕಂಟೋನ್ಮೆಂಟ್ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.
ಕಂಟೋನ್ಮೆಂಟ್ ವ್ಯಾಪ್ತಿಯ ಜಿಲ್ಲಾಧಿಕಾರಿ ಕಚೇರಿ, ರೈಲು ನಿಲ್ದಾಣ, ಕ್ಯಾಂಪ್ ಪ್ರದೇಶ, ಮಿಲ್ಟ್ರಿ ಮಹಾದೇವ ರಸ್ತೆ, ನಾನಾವಾಡಿ ರಸ್ತೆ, ಜ್ಯೋತಿ ಕಾಲೇಜು, ಗಾಂಧಿ ನಗರ, ಅಶೋಕ ವೃತ್ತ, ಭರತೇಶ ಕಾಲೇಜು ಹಾಗೂ ಪಾಲಿಕೆ ವ್ಯಾಪ್ತಿಯ ಮಾರುತಿ ನಗರ, ಶಾಸ್ತ್ರಿ ನಗರ, ಮಾಳಮಾರುತಿ, ಮಹಾಂತೇಶ ನಗರ, ಸದಾಶಿವ ನಗರ, ರಾಮತೀರ್ಥ ನಗರ ಮತ್ತಿತರ ಪ್ರದೇಶಗಳಲ್ಲಿ ಚರಂಡಿ ದುರಸ್ತಿ ಹಾಗೂ ಹೂಳೆತ್ತುವ ಕಾಮಗಾರಿಗಳು ವರ್ಷಗಳು ಕಳೆದರೂ ಪ್ರಾರಂಭವಾಗದೆ ನನೆಗುದಿಗೆ ಬಿದ್ದಿವೆ.
ಹೊಸ ರಸ್ತೆ ಕಾಮಗಾರಿ ಇಲ್ಲ: ಪಾಲಿಕೆಯ ವ್ಯಾಪ್ತಿಯ ಸುಮಾರು 850 ಕಿಮೀ ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸುಮಾರು 500 ಕಿಮೀ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನು ಮಾಡಲಾಗಿದೆ. ಇನ್ನುಳಿದ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚದೆ ಹಾಗೆ ಬೀಡಲಾಗಿದೆ. ಈಗಾಗಲೇ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಗುತ್ತಿಗೆ ನೀಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ಸಮಸ್ಯೆ: ನಗರದಲ್ಲಿ ನಿತ್ಯ 500 ರಿಂದ 650 ಟನ್ ತ್ಯಾಜ್ಯ ಉತ್ಪಾದನೆ ಯಾಗುತ್ತಿದ್ದು, ವಿಲೇವಾರಿಗೆ ಸಮಸ್ಯೆ ಉಂಟಾಗುತ್ತಿದೆ. ಈಗಾಗಲೇ ರಸ್ತೆ ಬದಿಗಳಲ್ಲಿ ಹಾಗೂ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ತ್ಯಾಜ್ಯ ವಿಲೇವಾರಿ ಸ್ಥಳ, ಹಾಕಲಾಗುತ್ತಿದೆ. ಬೀದಿ ಬದಿಯಲ್ಲಿ ಶಾಖಾಹಾರಿ ಮತ್ತು ಮಾಂಸಾಹಾರಿ ಅಂಗಡಿಕಾರರು ತ್ಯಾಜ್ಯಗಳನ್ನು ಚರಂಡಿಗಳಿಗೆ ಹಾಕುತ್ತಿರುವುದು ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿಗಳ ದುರಸ್ತಿ ಕಾಮಗಾರಿಗಳ ಟೆಂಡರ್ ಕರೆಯಲಾಗಿದೆ. ಗಣಪತಿ ವಿಸರ್ಜನೆ ಮೆರವಣಿಗೆ ಸಾಗುವ ಮಾರ್ಗಗಳ ಡಾಂಬರೀಕರಣ, ಬೀದಿ ದೀಪ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.
| ಡಾ.ರುದ್ರೇಶ ಘಾಳಿ ಪಾಲಿಕೆ ಆಯುಕ್ತ