ಸವಣೂರ: ಪುರಸಭೆ ವ್ಯಾಪ್ತಿಯ ಮನೆಗಳ ಇ-ಸ್ವತ್ತು ಉತಾರ ಪೂರೈಕೆ ಹಾಗೂ ಆಸ್ತಿ ದುರಸ್ತಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಕಳೆದ 2-3 ವರ್ಷಗಳಿಂದ ಇ-ಸ್ವತ್ತಿಗಾಗಿ ಹಾಗೂ ಆಸ್ತಿ ದುರಸ್ತಿ ಮಾಡಿಕೊಡುವಂತೆ ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಸ್ಪಂದನೆ ಸಿಗುತ್ತಿಲ್ಲ. ಆದ್ದರಿಂದ, ಇ-ಸ್ವತ್ತುಗಳ ಹಾಗೂ ಮನೆಗಳ ಆಸ್ತಿ ದುರಸ್ತಿ ಕಾರ್ಯ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ ಪುರಸಭೆ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಇ-ಸ್ವತ್ತು ಹಾಗೂ ಆಸ್ತಿ ದುರಸ್ತಿಗಾಗಿ ಬಂದಿರುವ ಸಾಕಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈ ಹಿಂದೆ ವಿಲೇವಾರಿಗೊಳ್ಳದ ಅರ್ಜಿಗಳನ್ನು ಮರು ಪರಿಗಣಿಸಿ, ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಸಾರ್ವಜನಿಕರು ಸಹಕಾರ ನೀಡಿದರೆ ಇ-ಆಸ್ತಿ ಪೂರೈಕೆಗೆ ಹೆಚ್ಚಿನ ಒತ್ತು ನೀಡಿ, ಕಡಿಮೆ ಸಮಯದಲ್ಲಿ ಇ-ಸ್ವತ್ತು ಉತಾರ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಳುವೇಶ ನೀರಲಗಿ, ಮುಸ್ತಾಕ ಕೊಯ್ತೆವಾಲೆ, ಶಂಭಣ್ಣ ತೆಗ್ಗಿಹಳ್ಳಿ, ಕಲ್ಲಯ್ಯ ಮಠಪತಿ, ವೀರಯ್ಯ ಮಠಪತಿ, ಚಂದ್ರು ಕುಂಬಾರ, ಜಾಫರ ಚೌಪದಾರ, ನೌಶಾದ್ ಬಾರೂದಖಾನಿ, ಶೇಖಯ್ಯ ಮಠಪತಿ, ಮಂಜುನಾಥ ನೀರಲಗಿ, ಮುಸ್ತಫಾ ಹವಾಲ್ದಾರ್ ಇತರರು ಇದ್ದರು.