ಬೆಂಗಳೂರು: ಪ್ರತಿಪಕ್ಷಗಳ ಗೈರಿನ ನಡುವೆಯೂ ವಿಧಾನಸಭೆ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಹಾರ ತಿದ್ದುಪಡಿ ವಿಧೇಯಕ ಮಂಡನೆ ಆಗಿದೆ.
ಈಗಾಗಲೇ ವಿಧಾನ ಪರಿಷತ್ತಿನಲ್ಲಿ ಎಪಿಎಂಸಿ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಇದೀಗ ಈ ಕಾಯ್ದೆಯನ್ನು ವಿಧಾನಸಭೆಯಲ್ಲಿ ಅಂಗೀಕಾರ ಮಾಡುವಲ್ಲಿ ರಾಜ್ಯ ಸರ್ಕಾರ ಗುರುವಾರ ಯಶಸ್ವಿಯಾಗಿದೆ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ವಿಧೇಯಕ ಮಂಡಿಸಿದರು. ವಿಧೇಯಕದ ಮೇಲೆ ಮಾತನಾಡಿದ ಬಿಜೆಪಿ ಅರಗ ಜ್ಞಾನೇಂದ್ರ, ಇದನ್ನು ರೈತ ವಿರೋಧ ಕಾಯ್ದೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇದು ರೈತಪರ ಮತ್ತು ರೈತ ಕಲ್ಯಾಣ ಕಾಯ್ದೆ. ನಾನು ಅಡಕೆ ಬೆಳೆಗಾರ, ನಾನು ಎಪಿಎಂಸಿ ಒಳಗೆ ಮಾರಾಟ ಮಾಡಿದರೆ ಸುಮಾರು ಶೇ.3ರಷ್ಟು ಕಮಿಷನ್ ಮತ್ತು ಸೆಸ್ ರೂಪದಲ್ಲಿ ಹೋಗುತ್ತಿತ್ತು. ಒಂದು ಲೋಡ್ ಅಡಕೆಗೆ 1 ಲಕ್ಷ ರೂ. ವ್ಯತ್ಯಾಸವಾಗುತ್ತಿತ್ತು ಎಂದರು.
ಸಿದ್ದು ಸವದಿ ಮಾತನಾಡಿ, ಕಾಯ್ದೆ ವಿರೋಧಿಸುವವರು ಯಾವ ಕಾರಣದಿಂದ ರೈತರಿಗೆ ಹಾನಿ ಆಗುತ್ತದೆ ಎಂಬುದನ್ನು ಹೇಳಬೇಕು. ವ್ಯಾಪಾರಿಗಳು ಕಾನೂನು ಬಾಹಿರವಾಗಿ ಕಮಿಷನ್ ಪಡೆಯುತ್ತಿದ್ದರು. ರೈತರ ಬಗ್ಗೆ ಕಿಂಚಿತ್ ಕಾಳಜಿ ಇದ್ದರೆ ಬಿಲ್ ಸ್ವಾಗತಿಸಬೇಕು ಎಂದರು.
ಬಿಎಸ್ಪಿಯ ಎನ್.ಮಹೇಶ್ ಮಾತನಾಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ರಾಜಕಾರಣದ ಬಗ್ಗೆ ನಾನು ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಏಕಸ್ವಾಮ್ಯ ಮಾಡಿಕೊಳ್ಳಬಹುದು ಎಂಬ ಆತಂಕ ರೈತರಲ್ಲಿದೆ. ಇದನ್ನು ಸರ್ಕಾರಗಳು ಪರಿಗಣಿಸಬೇಕು. ರೈತನ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದರೆ ರೈತರು ಈ ಕಾಯ್ದೆಯನ್ನು ಒಪ್ಪುವ ಸಾಧ್ಯತೆಯಿದೆ ಎಂದು ಸಲಹೆ ನೀಡಿದರು.
ಇದಕ್ಕೆ ವಿವರಣೆ ನೀಡಿದ ಎಸ್.ಟಿ.ಸೋಮಶೇಖರ್, 2013 ರಿಂದ 18ರ ಅವಧಿಯಲ್ಲಿ 60 ಬಹುರಾಷ್ಟ್ರೀಯ ಕಂಪನಿಗೆ ಪರವಾನಗಿ ಕೊಟ್ಟಿದ್ದಾರೆ. ಎಲ್ಲೂ ಕಾಯ್ದೆ ರೈತ ವಿರೋಧಿ ಎಂದು ಹೇಳಿಲ್ಲ. ಕನಿಷ್ಠ ಬೆಂಬಲ ಬೆಲೆ ಇದ್ದೇ ಇರುತ್ತದೆ. ರೈತರು ಆತಂಕ ಪಡಬೇಕಿಲ್ಲ. ರೈತರಿಗೆ ಒಳ್ಳೆಯ ಬೆಲೆ ಸಿಗಬೇಕು ಎಂದೇ ಈ ಕಾಯ್ದೆಯನ್ನು ತಂದಿದ್ದೇವೆ ಎಂದರು.
ಗೋಹತ್ಯೆ ನಿಷೇಧ ವಿಧೇಯಕ ಪಾಸ್: 5 ಲಕ್ಷ ರೂ. ದಂಡ, 7 ವರ್ಷ ಜೈಲು ಶಿಕ್ಷೆಗೆ ಅವಕಾಶ
‘ಹಣ ಕೊಟ್ಟೆ, ಮನೆ ಮಾಡಿ ಕೊಟ್ಟೆ, ನನ್ನೊಂದಿಗೆ ಲೈಂಗಿಕವಾಗಿ ಸಹಕರಿಸು… ಎಂದ ನಗರಸಭೆ ಮಾಜಿ ಸದಸ್ಯ’
ಮದ್ವೆಗೆ 2 ದಿನ ಇದ್ದಂತೆ ವಧುಗೆ ಕೈಕೊಟ್ಟ ವರ! ಮದ್ವೆ ದಿನ ವಾಪಸ್ ಬಂದವನಿಂದ ಮತ್ತೊಂದು ಶಾಕ್