ರಾಣೆಬೆನ್ನೂರ: ತಾಲೂಕಿನ ಹುಲಿಹಳ್ಳಿ ಬಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೆಗಾ ಮಾರುಕಟ್ಟೆ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಗೊಂದಲಗಳನ್ನು ನಿವಾರಿಸಬೇಕು ಹಾಗೂ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ಥಳೀಯ ಎಪಿಎಂಸಿ ವರ್ತಕರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಈ ಸಮಯದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಮೆಗಾ ಮಾರುಕಟ್ಟೆ ನಿವೇಶನಗಳ ಹಂಚಿಕೆ ಕುರಿತು ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ನಿರಂತರವಾಗಿರುತ್ತದೆ. ಒಂದು ವೇಳೆ ಇದಕ್ಕೂ ಸ್ಪಂದನೆ ಸಿಗದಿದ್ದರೆ ಫೆ. 2ರಿಂದ ಎಲ್ಲ ವರ್ತಕರುಗಳು ಸಂಪೂರ್ಣ ವಹಿವಾಟು ಬಂದ್ ಮಾಡಲಾಗುವುದು. ಇದರಿಂದ ಮುಂದೆ ಆಗುವ ತೊಂದರೆಗಳಿಗೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದರು.
ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ಉಪಾಧ್ಯಕ್ಷ ಮಾಲತೇಶ ಕಜ್ಜರಿ, ಗೌರವ ಕಾರ್ಯದರ್ಶಿ ಗುರುಪ್ರಕಾಶ ಜಂಬಗಿ, ವಿ.ಪಿ. ಲಿಂಗನಗೌಡ್ರ, ಸಿ.ಆರ್. ಅಸುಂಡಿ, ಮಲ್ಲಿಕಾರ್ಜುನ ಅರಳಿ, ಕುಮಾರ ಜಂಬಗಿ, ರಾಜಣ್ಣ ಮೋಟಗಿ, ಶಿವಣ್ಣ ಸುಣಗಾರ ಮತ್ತಿತರರು ಪಾಲ್ಗೊಂಡಿದ್ದರು.