More

    ಪ್ರೀತಿಸಿ ಮದುವೆ ಆಗಿದಲ್ಲದೆ; ಅತ್ತೆ ಮನೆಯನ್ನೇ ದೋಚಿದ್ದ ಅಳಿಯ

    ಬೆಂಗಳೂರು: ಕುಟುಂಬದ ಜತೆ ಹೊರರಾಜ್ಯಕ್ಕೆ ತೆರಳಿದ್ದ ಅತ್ತೆ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದ ಅಳಿಯನನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

    ಹಲಸೂರಿನ ಎಂ.ವಿ.ಗಾರ್ಡನ್ ನಿವಾಸಿ ಪ್ರದೀಪ್ ಕುಮಾರ್ (23) ಬಂಧಿತ. 43 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಹಲಸೂರು ನಿವಾಸಿ ರೆಜಿನಾ ಎಂಬುವರ ಮನೆಯಲ್ಲಿ ಕಳ್ಳತನ ಆಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಒಂದೂವರೆ ವರ್ಷದ ಹಿಂದೆ ಹಲಸೂರು ನಿವಾಸಿ ರೆಜಿನಾ ಅವರ ಕಿರಿಯ ಪುತ್ರಿ ಲಾವಣ್ಯ ಎಂಬಾಕೆಯನ್ನು ಆರೋಪಿ ಪ್ರದೀಪ್ ಪ್ರೀತಿಸುತ್ತಿದ್ದ. ಪಾಲಕರ ವಿರೋಧದ ನಡುವೆಯೇ ಆಕೆಯನ್ನು ಮನೆಯಿಂದ ಕರೆದುಕೊಂಡು ಹೋಗಿ ಮದುವೆಯಾಗಿ ಎಂ.ವಿ.ಗಾರ್ಡನ್‌ನಲ್ಲಿ ನೆಲೆಸಿದ್ದ.
    ಇತ್ತೀಚೆಗೆ ರೆಜಿನಾ ಕುಟುಂಬದೊಂದಿಗೆ ಕನ್ಯಾಕುಮಾರಿಗೆ ತೆರೆಳಿದ್ದರು. ಈ ವಿಚಾರ ತಿಳಿದ ಅಳಿಯ ಪ್ರದೀಪ್ ಸೀದಾ ಅತ್ತೆ ಮನೆ ಬಳಿ ಬಂದು ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ್ದ.

    ಅಪರಿಚಿತ ರೆಜಿನಾ ಮನೆಯಿಂದ ಹೊರಗೆ ಬರುತ್ತಿರುವುದನ್ನು ನೋಡಿದ ಸ್ಥಳೀಯರು ಪ್ರಶ್ನಿಸಿದ್ದರು. ಆರೋಪಿಯು ನಾನು ರೆಜಿನಾ ಸಂಬಂಧಿಕ ಎಂದು ಹೇಳಿದ್ದಾನೆ. ಸ್ಥಳೀಯರು ರೆಜಿನಾ ಅವರ ಮೊಬೈಲ್‌ಗೆ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದ್ದು, ಸಾಧ್ಯವಾಗಿಲ್ಲ. ಕೆಲವರು ಮೊಬೈಲ್‌ನಲ್ಲಿ ಆರೋಪಿಯ ಫೋಟೋ ತೆಗೆದುಕೊಂಡಿದ್ದರು. ಪ್ರದೀಪ್ ಯಾರಿಗೂ ಅನುಮಾಬಾರದಂತೆ ಸ್ಥಳದಿಂದ ಪರಾರಿಯಾಗಿದ್ದ. ಪ್ರವಾಸ ಮುಗಿಸಿ ರೆಜಿನಾ ಮನೆಗೆ ವಾಪಾಸಾದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿತ್ತು. ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ತೆಗೆದಿದ್ದ ಫೋಟೋವನ್ನು ರೆಜಿನಾಗೆ ಕೊಟ್ಟಿದ್ದರು. ಇದರ ಮೇರೆಗೆ ಪ್ರದೀಪ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts