ಟೋಕಿಯೊ: ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿ ತವರಿಗೆ ಮರಳಿದ ಭಾರತದ ಕ್ರೀಡಾಪಟುಗಳಿಗೆ ಭರ್ಜರಿ ಸ್ವಾಗತ ಸಿಗುತ್ತಿರುವ ನಡುವೆ ಮಹಾರಾಷ್ಟ್ರದ ಬಿಲ್ಗಾರ ಪ್ರವೀಣ್ ಜಾಧವ್ಗೆ ‘ಬೆದರಿಕೆ ಕರೆ’ಗಳ ಮೂಲಕ ಸ್ವಾಗತ ದೊರೆತಿದೆ! ಹೌದು, ಪಕ್ಕದ ಮನೆಯವರಿಂದಲೇ ಅವರಿಗೆ ಈ ‘ಬೆದರಿಕೆ ಕರೆ’ಗಳು ಬಂದಿವೆ.
ಮಹಾರಾಷ್ಟ್ರದ ಸತಾರ ಜಿಲ್ಲೆಯ ಸರದೆ ಎಂಬ ಹಳ್ಳಿಯವರಾದ 25 ವರ್ಷದ ಜಾಧವ್, ಹೊಸ ಮನೆಯೊಂದನ್ನು ಕಟ್ಟಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಗಾದೆ ತೆಗೆದಿರುವ ನೆರೆಹೊರೆಯವರು, ದಿನಗೂಲಿಯಾಗಿರುವ ತಂದೆ ಮತ್ತು ತಾಯಿಯನ್ನು ಬೆದರಿಸುತ್ತಿದ್ದಾರೆ.
ಇದನ್ನೂ ಓದಿ: ಮತ್ತೆ ಬಾಲಿವುಡ್ ನಟಿ ಜತೆ ಕಾಣಿಸಿಕೊಂಡ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್!
ಟೋಕಿಯೊ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿ ತಾವು ಸಂಪಾದಿಸಿರುವ ಜನಪ್ರಿಯತೆಗೆ ಅಕ್ಕಪಕ್ಕದ ಮನೆಯವರು ಅಸೂಯೆಗೊಂಡಿದ್ದಾರೆ ಎಂದು ಸೈನಿಕರೂ ಆಗಿರುವ ಜಾಧವ್ ದೂರಿದ್ದಾರೆ. ಗುಡಿಸಲು ಮನೆ ಹೊಂದಿದ್ದ ಅವರು, ಸೇನೆಯಲ್ಲಿ ಕೆಲಸ ಸಿಕ್ಕ ಬಳಿಕ ಅದೇ ಜಾಗದಲ್ಲಿ ಹೊಸ ಮನೆಯೊಂದನ್ನು ನಿರ್ಮಿಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.
‘ನಾವು ಹೊಸ ಮನೆ ನಿರ್ಮಿಸುತ್ತಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನಾನು ನಮ್ಮ ಜಾಗದಲ್ಲಿ ಮನೆ ಕಟ್ಟುತ್ತಿರುವಾಗ ಅವರಿಗೆ ಏನು ಸಮಸ್ಯೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಜಾಧವ್ ವಿವರಿಸಿದ್ದಾರೆ. ಈ ವಿವಾದವನ್ನು ಅವರು ಸೇನೆಯ ಗಮನಕ್ಕೆ ತಂದಿರುವ ಬೆನ್ನಲ್ಲೇ, ಆರ್ಮಿ ಕರ್ನಲ್ ನೀಡಿರುವ ಸೂಚನೆಯ ಮೇರೆಗೆ ಸತಾರ ಜಿಲ್ಲೆಯ ಎಸ್ಪಿ ಅಜಯ್ ಕುಮಾರ್ ಬನ್ಸಾಲ್ ಈ ಪ್ರಕರಣದ ತನಿಖೆ ಆರಂಭಿಸಿದ್ದಾರೆ.
7ನೇ ತರಗತಿಯಲ್ಲೇ ಶಾಲೆ ತ್ಯಜಿಸಿ ತನ್ನ ಜತೆ ಕಟ್ಟಡ ನಿರ್ಮಾಣ ಕೆಲಸಗಳಿಗೆ ಬರುವಂತೆ ತಂದೆ ಹೇಳಿದ್ದರೂ, ಶಾಲೆಯ ಕ್ರೀಡಾ ಅಧ್ಯಾಪಕರ ಸಲಹೆಯ ಮೇರೆಗೆ ಜಿಲ್ಲಾ ಪರಿಷದ್ ಶಾಲೆಗೆ ಸೇರ್ಪಡೆಗೊಂಡಿದ್ದರು. ಬಳಿಕ ಕ್ರೀಡಾ ಪ್ರಬೋಧಿನಿ ಶಾಲೆಯಲ್ಲಿ ಅವರಿಗೆ ಆಕಸ್ಮಿಕವಾಗಿ ಆರ್ಚರಿ ಕ್ರೀಡೆಯ ಸಂಪರ್ಕ ಬೆಳೆಯಿತು. ಈ ಕ್ರೀಡೆಯಿಂದಲೇ ಪುಣೆಯಲ್ಲಿ ಆರ್ಮಿ ಕ್ರೀಡಾ ಇನ್ಸ್ಟಿಟ್ಯೂಟ್ಗೆ ಆಯ್ಕೆಯಾದ ಬಳಿಕ ಅವರ ಜೀವನ ಬದಲಾಗಿದೆ.
VIDEO | ಟೋಕಿಯೊ ಒಲಿಂಪಿಕ್ಸ್ನಲ್ಲಿ ಬಿದ್ದು ಎದ್ದು ಓಡಿ ಗೆದ್ದ ಡಚ್ ಓಟಗಾರ್ತಿ!