ನವದೆಹಲಿ: ರೇಡಿಯೊ ತರಂಗಾಂತರವೇ ಇದರ ಗುರಿ, ರೇಡಿಯೇಷನ್ ವಿರುದ್ಧ ಇದು ರುದ್ರ ಭಯಂಕರ. ಅಸಲಿಗೆ ಇದರ ಹೆಸರೇ ರುದ್ರಂ. ಇದು ಇಂದು ಆಕಾಶದಲ್ಲಿ ಹಾರಾಟ ನಡೆಸಿದ್ದಲ್ಲದೆ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ.
ಇದು ಸ್ವದೇಶಿ ನಿರ್ಮಿತ ಆ್ಯಂಟಿ ರೇಡಿಯೇಷನ್ ಮಿಸ್ಸೈಲ್ ರುದ್ರಂ ಕುರಿತ ಮಾತು. ವಾಯುಸೇನೆಗೆಂದು ರೂಪಿಸಲಾಗಿರುವ ದೇಶದ ಪ್ರಥಮ ಆ್ಯಂಟಿ ರೇಡಿಯೇಷನ್ ಕ್ಷಿಪಣಿ ರುದ್ರಂ 1ರ ಪ್ರಾಯೋಗಿಕ ಹಾರಾಟ ಶುಕ್ರವಾರ ಯಶಸ್ವಿಯಾಗಿ ನಡೆದಿದ್ದು, ಇದರ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೊಸ ಪೀಳಿಗೆಯ ರೇಡಿಯೇಷನ್ ನಿರೋಧಕ ಕ್ಷಿಪಣಿ ರುದ್ರಂ ಒಡಿಶಾದ ಕರಾವಳಿಯ ದ್ವೀಪ ಪ್ರದೇಶದಲ್ಲಿನ ದ್ವಿಚಕ್ರ ವಾಹನದಲ್ಲಿರಿಸಿದ್ದ ರೇಡಿಯೇಷನ್ ಗುರಿಯನ್ನು ಪತ್ತೆ ಹಚ್ಚಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಇದನ್ನು ಎಸ್ಯು-30 ಎಂಕೆಐ ಯುದ್ಧವಿಮಾನ ಮೂಲಕ ಉಡಾಯಿಸಲಾಗಿದೆ ಎಂದು ಡಿಆರ್ಡಿಒ ತಿಳಿಸಿದೆ.
ಈ ಮೂಲಕ ಶತ್ರು ದೇಶಗಳ ರಾಡಾರ್, ಕಮ್ಯುನಿಕೇಷನ್ ಸೈಟ್ಸ್ ಮತ್ತು ರೇಡಿಯೋ ತರಂಗಾಂತರದ ಇತರ ಗುರಿಗಳ ವಿರುದ್ಧ ದೇಶದ ತನ್ನದೇ ಆದ ಆ್ಯಂಟಿ ರೇಡಿಯೇಷನ್ ಕ್ಷಿಪಣಿಯನ್ನು ಹೊಂದಿದಂತಾಗಿದೆ ಎಂದು ಡಿಆರ್ಡಿಒ ಹೇಳಿಕೊಂಡಿದೆ. (ಏಜೆನ್ಸೀಸ್)