ಬೆಂಗಳೂರು: ಗುರುರಾಜ ಕುಲಕರ್ಣಿ ಇದೇ ಮೊದಲ ಬಾರಿಗೆ ಕಥೆ ಬರೆದು ನಿರ್ದೇಶಿಸಿರುವ ‘ಅಮೃತ ಅಪಾರ್ಟ್ಮಮೆಂಟ್ಸ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ನವೆಂಬರ್ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಈ ಮಧ್ಯೆ, ‘ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು …’ ಎಂಬ ಲಿರಿಕಲ್ ಹಾಡು ಯೂಟ್ಯೂಬ್ನ ಜಂಕಾರ್ ಮ್ಯೂಸಿಕ್ ಚಾನಲ್ನಲ್ಲಿ ಬಿಡುಗಡೆಯಾಗಿ, ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಸಖತ್, ಅವತಾರ್ ಪುರುಷ; ಆಗಮನಕ್ಕೆ ದಿನಾಂಕ ನಿಗದಿ
ಚಿತ್ರತಂಡದಿಂದ ಬಿಡುಗಡೆಯಾಗುತ್ತಿರುವ ಎರಡನೇ ಹಾಡು ಇದಾಗಿದ್ದು, ಇದಕ್ಕೂ ಮುನ್ನ ‘ನಾವು ಬಂದೇವ್ …’ ಎನ್ನುವ ಹಾಡು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಆ ಹಾಡು ಸಹ ಸಾಕಷ್ಟು ಜನಪ್ರಿಯವಾಗಿದ್ದು, ಈಗ ಎರಡನೆಯ ಹಾಡು ಸಹ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿರುವುದು ಚಿತ್ರದ ಬಗ್ಗೆ ಚಿತ್ರತಂಡಕ್ಕಿರುವ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ.
‘ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು …’ ಒಂದು ಪ್ರೇಮಗೀತೆಯಾಗಿದ್ದು, ಗಂಡ-ಹೆಂಡತಿಯ ಪ್ರೀತಿಯ ಕುರಿತದ್ದಾಗಿದೆ. ಗಂಡ-ಹೆಂಡತಿಯ ಮಧ್ಯದ ಮುನಿಸು ಕರಗುವ ಸನ್ನಿವೇಶವನ್ನು ‘ಪ್ರೇಮಕವಿ’ ಕಲ್ಯಾಣ್ ತಮ್ಮ ಪದಗಳ ಮೂಲಕ ಬಹಳ ಚೆನ್ನಾಗಿ ಹಿಡಿದಿಟ್ಟಿದ್ದು, ಎಸ್.ಡಿ. ಅರವಿಂದ್ ಸಂಗೀತ ಸಂಯೋಜಿಸಿದ್ದಾರೆ. ಈ ಯುಗಳ ಹಾಡಿಗೆ ವಾಣಿ ಹರಿಕೃಷ್ಣ ಮತ್ತು ಅಜಯ್ ವಾರಿಯರ್ ಧ್ವನಿ ನೀಡಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ಅಭಿನಯದ ಅಣ್ಣಾತ್ತೆ ಇಂದು ಬಿಡುಗಡೆ
‘ಅಮೃತ ಅಪಾರ್ಟ್ಮೆಂಟ್ಸ್’ ಚಿತ್ರದಲ್ಲಿ ತಾರಕ್ ಪೊನ್ನಪ್ಪ, ಊರ್ವಶಿ ಗೋವರ್ಧನ, ಬಾಲಾಜಿ ಮನೋಹರ್, ಸೀತಾ ಕೋಟೆ, ಮಾನಸ ಜೋಷಿ, ಸಂಪತ್ಕುಮಾರ್ ಮುಂತಾದವರು ನಟಿಸಿದ್ದಾರೆ. ಜಿ9 ಕಮ್ಯುನಿಕೇಷನ್ಸ್ ಮೀಡಿಯಾ ಆಂಡ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ನಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಅರ್ಜುನ್ ಅಜಿತ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.