ಸಿದ್ದಾಪುರ: ತಾಲೂಕಿನ ಹಲಗೇರಿ ಗ್ರಾಪಂ ವ್ಯಾಪ್ತಿಯ ಮೆಣಸಿ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗನ ಮೃತ ದೇಹ ಪತ್ತೆಯಾಗಿದೆ.
ಗ್ರಾಪಂ ವ್ಯಾಪ್ತಿಯ ಸುತ್ತಮುತ್ತ ಕೆಎಫ್ಡಿ ಪ್ರಕರಣಗಳು ಕಂಡುಬರುತ್ತಿರುವುದರಿಂದ ಮಂಗನ ಮೃತ ದೇಹ ಪತ್ತೆಯಾಗಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.
ಸಾರ್ವಜನಿಕರು ಮಂಗಳವಾರ ಗ್ರಾಪಂಗೆ ತೆರಳಿ, ಈ ಹಿಂದೆ ಇದೆ ಟ್ಯಾಂಕ್ನಲ್ಲಿ ಮಂಗ ಸತ್ತಿದ್ದರೂ ಮುಚ್ಚಿಗೆ ಮಾಡದೆ ನಿರ್ಲಕ್ಷೃ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದು ಗ್ರಾಪಂಗೆ ಸಮುದಾಯ ಆರೋಗ್ಯ ಅಧಿಕಾರಿ ರವಿ ನಾಯ್ಕ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ರಾಠೋಡ್ ಧಾವಿಸಿ ಜನರ ಸಮಸ್ಯೆ ಆಲಿಸಿದ್ದಾರೆ. ಬಳಿಕ ಟ್ಯಾಂಕ್ ಪರಿಶೀಲಿಸಿ, ಟ್ಯಾಂಕ್ನ ನೀರು ಬಳಸುತ್ತಿರುವ ಜನರಲ್ಲಿ ಯಾವುದಾದರು ರೋಗ ಲಕ್ಷಣ ಕಂಡು ಬಂದರೆ ಕೂಡಲೇ ಚಿಕಿತ್ಸೆ ಕೊಡಿಸುವಂತೆ ಸೂಚನೆ ನೀಡಿದರು.
ಈಗಾಗಲೆ ಈ ಟ್ಯಾಂಕ್ ನಿಂದ ಜನರು ನೀರನ್ನು ಬಳಸಿದ್ದು ಮುಂದೆ ಇದರಿಂದ ತೊಂದರೆ ಆದರೆ ಸ್ಥಳೀಯ ಗ್ರಾಪಂನವರೇ ಹೊಣೆ ಹೊರಬೇಕು ಎಂದು ಜನ ಕಿಡಿಕಾರಿದರು.
ಮಂಗ ನೀರಲ್ಲಿ ಬಿದ್ದರೆ ಕೊಳೆಯಲು ಐದಾರು ದಿನ ಬೇಕು. ಯಾವುದೇ ಕಾರಣಕ್ಕೂ ಕೆಎಫ್ಡಿ ಬರಲು ಸಾಧ್ಯವಿಲ್ಲ. ಆದರೆ ಸಣ್ಣಪುಟ್ಟ ಜ್ವರ, ವಾಂತಿ ಭೇದಿ, ತುರಿಕೆ ಲಕ್ಷಣಗಳು ಕಂಡು ಬರಬಹುದು ಎಂದು ಅರೋಗ್ಯ ಅಧಿಕಾರಿ ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮೂರು ದಿನದಿಂದ ನೀರನ್ನು ಬಿಟ್ಟಿಲ್ಲ. ಟ್ಯಾಂಕನ್ನು ಸ್ವಚ್ಛಗೊಳಿಸಿ ನೀರು ಪೂರೈಸಲಾಗುವುದು. ಸ್ಥಳಕ್ಕೆ ಕಿರು ನೀರು ಮತ್ತು ನ್ಯೆರ್ಮಲ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
I ಗಂಗಾಧರ ಎಸ್.ನಾಯ್ಕ, ಹಲಗೇರಿ ಪಿಡಿಒ