ಕೈಲಾಂಚ : ಹಲವು ಕಾರ್ಯಕ್ರಮಗಳ ಮೂಲಕ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಉತ್ತಮ ಅಡಿಪಾಯ ಹಾಕುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಒದಗಿಸಿ ಗುಣಮಟ್ಟದ ಶಿಕ್ಷಣೆ ಆದ್ಯತೆ ನೀಡಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.
ಹೋಬಳಿಯ ಅವ್ವೇರಹಳ್ಳಿ ಗ್ರಾಮದಲ್ಲಿ 52 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕರ್ನಾಟಕ ಪಬ್ಲಿಕ್ ಶಾಲೆ ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಹೆಚ್ಚು ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ವಿದ್ಯಾರ್ಜನೆ ಮಾಡಿದರೆ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬಹುದು. ಕಲಿಯುವ ಆಸಕ್ತಿಯಿದ್ದಾಗ ಮಾತ್ರ ವಿದ್ಯೆ ಒಲಿಯುತ್ತದೆ. ಕೇವಲ ಅಂಕಗಳಿಕೆಗೆ ಸೀಮಿತವಾಗದೆ, ಜ್ಞಾನಾರ್ಜನೆ ಹಾಗೂ ಮುಂದಿನ ಭವಿಷ್ಯದ ದೃಷ್ಟಿಯಿಂದ ವ್ಯಾಸಂಗ ಮಾಡಿ. ಮೊಬೈಲ್ನಿಂದ ದೂರವಿದ್ದು ಅಗತ್ಯವಿದ್ದರಷ್ಟೇ ಬಳಸಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಶುದ್ಧ ಕುಡಿಯುವ ನೀರಿನ ಘಟಕ, ಶೌಚಗೃಹ ನಿರ್ಮಿಸಿಕೊಡುವಂತೆ ಶಾಸಕಿ ಅನಿತಾ ಕುಮಾರಸ್ವಾಮಿಗೆ ಶಾಲೆ ವಿದ್ಯಾರ್ಥಿಗಳು ಮನವಿ ಮಾಡಿದರು. ಶೀಘ್ರದಲ್ಲಿಯೇ ಶುದ್ಧ ನೀರಿನ ಘಟಕ, ಶೌಚಗೃಹ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅನಿತಾ ಭರವಸೆ ನೀಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ. ಉಮೇಶ್, ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ. ರಾಜಣ್ಣ, ಪ್ರಚಾರ ಸಮಿತಿ ಅಧ್ಯಕ್ಷ ಆರ್. ಪಾಂಡುರಂಗ, ಕಂಟ್ರಾಕ್ಟರ್ ತಮ್ಮಣ್ಣ, ಮಾಜಿ ಅಧ್ಯಕ್ಷೆ ಸವಿತಾ ದೇವರಾಜು, ಮುಖಂಡರಾದ ಅವ್ವೇರಹಳ್ಳಿ ಶಿವಲಿಂಗಯ್ಯ, ದೇವರದೊಡ್ಡಿ ಗೋಪಾಲನಾಯ್ಕ, ನಂದೀಶ್ಗೌಡ, ಸ್ವಾಮಿ, ಜೈಕುಮಾರ್, ನವೀನ್, ಪ್ರಭಾರ ಪ್ರಾಂಶುಪಾಲ ಶಿವಮಾದಯ್ಯ, ಉಪನ್ಯಾಸಕರಾದ ನಿಂಗೇಗೌಡ, ಗಂಗಾಧರ್, ಶಂಕರ್ನಾಯಕ್, ನರಸಿಂಹಸ್ವಾಮಿ, ರಾಜು, ಪ್ರೌಢಶಾಲಾ ಉಪ ಪ್ರಾಂಶುಪಾಲೆ ಪುಷ್ಪಲತಾ, ಶಿಕ್ಷಕ ಮಹಾಲಿಂಗಯ್ಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಪ್ರಮೀಳಾ ಮತ್ತಿತರರು ಇದ್ದರು.