ದಾಂಡೇಲಿ: ಪ್ರಸಕ್ತ ಕಾಲಘಟ್ಟದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಮಹತ್ವ ನೀಡುವುದು ಅವಶ್ಯವಾಗಿದೆ. ಮಕ್ಕಳ ಶಿಕ್ಷಣದ ಶುಭ ಸಂದರ್ಭಕ್ಕೆ ಅಂಗನವಾಡಿಗಳು ಪೂರಕವಾಗಿವೆ. ಹೆಣ್ಣು ಮಕ್ಕಳು ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಗಿಸುತ್ತಿದ್ದಾರೆ ಎಂದು ಆಡಳಿತ ಅಭಿವೃದ್ಧಿ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ ಹೇಳಿದರು.
ಶನಿವಾರ ನಗರದ ಮಿರಾಶಿ ವೆಸ್ಟ್ಕೋಸ್ಟ್ ಪೇಪರ್ ಮಿಲ್ನ ಸಾಮಾಜಿಕ ಹೊಣೆಗಾರಿಕೆಯಡಿ ನಗರಸಭೆಯ ಸಹಯೋಗದೊಂದಿಗೆ 22 ಲಕ್ಷ ರೂ. ವೆಚ್ಚದಲ್ಲಿ ನಿರ್ವಣಗೊಂಡ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಕಾರವಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ, ಪಂಚಾಯತ್ ಇಲಾಖೆ, ಸಮಗ್ರ ಶಿಶು ಯೋಜನೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಆರ್.ವಿ ದೇಶಪಾಂಡೆ ಬಿಪಿಎಲ್ ಕಾರ್ಡ್ ಹೊಂದಿದ ಹೆಣ್ಣು ಮಕ್ಕಳಿಗೆ ಸಾಂಕೇತಿಕವಾಗಿ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ ಬುಕ್ ಮತ್ತು ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಿದರು.
1.37 ಕೋಟಿ ರೂ. ವೆಚ್ಚದಲ್ಲಿ ದಾಂಡೇಲಿಯಲ್ಲಿ ದೇವರಾಜ ಅರಸು ಟರ್ವಿುನಲ್, ಕಿತ್ತೂರ ರಾಣಿ ಚನ್ನಮ್ಮ ವೃತ್ತದಿಂದ ಹಳೇ ದಾಂಡೇಲಿಯ ಸೇತುವೆವರೆಗಿನ ರಸ್ತೆ ಸುಧಾರಣೆಗಾಗಿ 2.80 ಕೋಟಿ ರೂ. ವೆಚ್ಚದ ಟೆಂಡರ್ ಕರೆಯಬೇಕಾಗಿದೆ. ಜೆ.ಕೆ ಸಿಮೆಂಟ್ನಿಂದ ವಾರ್ಡ್ ನಂ. 14ರಲ್ಲಿ ಅಂಗನವಾಡಿ ಹಾಗೂ ಐಟಿಸಿ ಕಂಪನಿಯಿಂದ ಬಂಗೂರನಗರ ಮಾದರಿ ಶಾಲೆಯಲ್ಲಿ ಸ್ಮಾರ್ಟ ಕ್ಲಾಸ್ ನಿರ್ವಣ, ವೋಲ್ವೋ ಕಂಪನಿಯಿಂದ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಲನಗರ, ಆಜಾದನಗರ, ಕರಂಪಳ್ಳಿ, ಮೈನಾಳ ಗ್ರಾಮದಲ್ಲಿ ಅಂಗನವಾಡಿ ದತ್ತು ಸ್ವೀಕಾರ ಮಾಡಿ ಅಭಿವೃದ್ಧಿ ಕಾರ್ಯ ಮತ್ತು ಹಳೇ ದಾಂಡೇಲಿಯ ಸರ್ಕಾರಿ ಪಿ.ಯು. ಕಾಲೇಜಿನಲ್ಲಿ ಮಕ್ಕಳಿಗೆ ಆನ್ಲೈನ್ ತರಬೇತಿ ಯೋಜನೆ ಹಮ್ಮಿಕೊಳ್ಳಲು ಯೋಜನೆಗಳನ್ನು ಸಿದ್ಧಗೊಳಿಸಲಾಗಿದೆ ಎಂದರು.
ವೆಸ್ಟ್ಕೋಸ್ಟ್ ಪೇಪರ್ ಮಿಲ್ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿ, ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆ ಸದಾ ಸಮಾಜ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸಲು ಸಿದ್ಧವಿದೆ ಎಂದರು.
ಇದೇ ವೇಳೆ ಆರ್.ವಿ. ದೇಶಪಾಂಡೆ ಅವರು ಆಜಾದನಗರ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ನೂತನ ಕಟ್ಟಡ, ಬಂಗೂರನಗರ ಪ್ರಾಥಮಿಕ ಶಾಲೆ ನೂತನ ಕಟ್ಟಡ ಉದ್ಘಾಟಿಸಿದರು. ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹಿದ್ ಪಠಾಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆರ್. ಹೆಗಡೆ, ಮಿರಾಶಿ ಗಲ್ಲಿ ವಾರ್ಡ್ ಸದಸ್ಯ ರೋಶನಜಿತ್, ನಗರಸಭೆ ಮಾಜಿ ಅಧ್ಯಕ್ಷೆ ಸರಸ್ಪತಿ ರಜಪೂತ, ದಾಂಡೇಲಿ ತಹಸೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ರಾಜಾರಾಮ ಪವಾರ, ತಾಲೂಕು ಪಂಚಾಯಿತಿ ಅಧಿಕಾರಿ ಪ್ರಕಾಶ ಹಾಲಮ್ಮನವರ, ವೆಸ್ಟ್ಕೋಸ್ಟ್ ಪೇಪರ್ ಮಿಲ್ ಪಿಆರ್ಒ ರಾಜೇಶ ತಿವಾರಿ ಇದ್ದರು.
ಬಿಪಿಎಲ್ ಕಾರ್ಡ್ದಾರರಿಗೆ ಅರಿವು ಮೂಡಿಸಿ
ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸುಧಾರಣೆ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕ ಆರ್.ವಿ. ದೇಶಪಾಂಡೆ, ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆಗೆ ಹೆಚ್ಚಿನ ಮಹತ್ವ ನೀಡಬೇಕು. ಬರುವ ಬಡವರಿಗೆ ಹೆಚ್ಚಿನ ಕಾಳಜಿ ವಹಿಸಬೇಕು, ಬಿಪಿಎಲ್ ಕಾರ್ಡ್ದಾರರಿಗೆ ಸಿಗುವ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಭಿತ್ತಿ ಚಿತ್ರಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಬೇಕು. ಸೇವೆಯಲ್ಲಿ ನಿಷ್ಕಾಳಜಿ ತೋರುವ ವೈದ್ಯರು ಹಾಗೂ ಸಿಬ್ಬಂದಿ ಶಿಸ್ತು ಕ್ರಮ ಕೈಕೊಳ್ಳುವ ಎಚ್ಚರಿಕೆ ನೀಡಿದರು.