ಹೈದರಾಬಾದ್: ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ಒಳಗಾಗಿ ಚೇತರಿಸಿಕೊಂಡ ಬಳಿಕ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರನ್ನು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಗುರುವಾರ ವಿಶೇಷ ವಿಮಾನದಲ್ಲಿ ವಿಜಯವಾಡ ನಗರದಿಂದ ಬೇಗುಂಪೇಟೆಗೆ ಬಂದಿಳಿದ ಸಿಎಂ ಜಗನ್ ಅವರನ್ನು ಬಿಆರ್ಎಸ್ ಶಾಸಕರಾದ ವೇಮುಲಾ ಪ್ರಶಾಂತ್ ರೆಡ್ಡಿ ಮತ್ತು ಪಲ್ಲ ರಾಜೇಶ್ವರ್ ರೆಡ್ಡಿ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಸಿಎಂ ಜಗನ್ ಅವರು ಹೈದರಾಬಾದ್ನ ನಂದಿನಗರದಲ್ಲಿರುವ ಕೆಸಿಆರ್ ನಿವಾಸದ ಭೇಟಿ ನೀಡಿದರು.
ಕೆಸಿಆರ್ ನಿವಾಸದಲ್ಲಿ ವೈಎಸ್ ಜಗನ್ ಅವರನ್ನು ಬಿಆರ್ಎಸ್ ಕಾರ್ಯಾಧ್ಯಕ್ಷ ಹಾಗೂ ಕೆಸಿಆರ್ ಪುತ್ರ ಕೆ.ಟಿ. ರಾಮರಾವ್ ಮತ್ತು ಇತರ ಹಿರಿಯ ಬಿಆರ್ಎಸ್ ಮುಖಂಡರಾದ ತಲಸಾನಿ ಶ್ರೀನಿವಾಸ ಯಾದವ್, ಮಹಮೂದ್ ಅಲಿ, ಜೋಗಿನಪಲ್ಲಿ ಸಂತೋಷ್ ಕುಮಾರ್, ಪಿ ಕೌಶಿಕ್ ರೆಡ್ಡಿ, ಎ ಜೀವನ್ ರೆಡ್ಡಿ ಮತ್ತು ಸಿ.ಎಚ್ ಲಿಂಗಯ್ಯ ಅವರು ಸ್ವಾಗತಿಸಿದರು.
ಮೂಲಗಳ ಪ್ರಕಾರ ಜಗನ್ ರೆಡ್ಡಿ ಅವರು ಕೆಸಿಆರ್ ನಿವಾಸದಲ್ಲಿ ಸುಮಾರು ಒಂದು ಗಂಟೆ ಸಮಯ ಕಳೆದರು ಮತ್ತು ಕೆಸಿಆರ್ ಆರೋಗ್ಯವನ್ನು ವಿಚಾರಿಸಿದರು. ಚಂದ್ರಶೇಖರ ರಾವ್ ಅವರು ಡಿ.07ರಂದು ತಮ್ಮ ಎರವಳ್ಳಿ ಎಸ್ಟೇಟ್ನ ಬಾತ್ರೂಮ್ನಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಹೈದರಾಬಾದ್ನ ಯಶೋದಾ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು.
ಹಿಪ್ ರಿಪ್ಲೇಸ್ಮೆಂಟ್ ಆಪರೇಷನ್ ಯಶಸ್ವಿಯಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ತೆಲಂಗಾಣದ ನೂತನ ಸಿಎಂ ರೇವಂತ್ ರೆಡ್ಡಿ ಸಹ ಕೆಸಿಆರ್ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
ತೆಲಂಗಾಣದಲ್ಲಿ ಇತ್ತೀಚೆಗೆ ಅಂತ್ಯಗೊಂಡ ವಿಧಾನಸಭಾ ಚುನಾವಣೆಯಲ್ಲಿ, ಕೆ. ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಹ್ಯಾಟ್ರಿಕ್ ಸಾಧಿಸುವ ಭರವಸೆ ಹೊಂದಿತ್ತು, ಆದ್ರೆ, ಕಾಂಗ್ರೆಸ್ ಗೆಲುವಿನ ಮುಖೇನ ಅಧಿಕಾರದ ಚುಕ್ಕಾಣಿ ಹಿಡಿದಿದ್ದರಿಂದ ಬಿಆರ್ಎಸ್ ಹ್ಯಾಟ್ರಿಕ್ ಕನಸು ವಿಫಲಗೊಂಡಿತು. ಕಾಂಗ್ರೆಸ್ ಉಸ್ತುವಾರಿಯನ್ನು ಮುನ್ನಡೆಸಿದ್ದ ಕಸಭಾ ಸಂಸದ ರೇವಂತ್ ರೆಡ್ಡಿ, 119 ಸದಸ್ಯ ಬಲದ ಸದನದಲ್ಲಿ 64 ಸ್ಥಾನಗಳನ್ನು ಗೆಲ್ಲುವ ಮೂಲಕ ತೆಲಂಗಾಣದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. (ಏಜೆನ್ಸೀಸ್)
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ಯಶಸ್ವಿ: ಎರಡ್ಮೂರು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಲಕ್ಷದ್ವೀಪದ ಪ್ರವಾಸದ ವಿಡಿಯೋ ಹಂಚಿಕೊಂಡ ಪ್ರಧಾನಿ: ಗಮನ ಸೆಳೆದ ನಮೋ ಸ್ನಾರ್ಕೆಲಿಂಗ್ ಸಾಹಸ