ಶಿರಸಿ: ಕ್ಷುಲ್ಲಕ ವಿಷಯಕ್ಕೆ ಜಗಳ ಆರಂಭಗೊಂಡು ವೃದ್ಧನ ಮೇಲೆ ಕಾರು ಹಾಯಿಸಿ ಕೊಲೆಮಾಡಿದ ಘಟನೆ ತಾಲೂಕಿನ ಬನವಾಸಿ ಬಳಿಯ ಕಾಳಂಗಿಯಲ್ಲಿ ನಡೆದಿದೆ.
ಕಾಳಂಗಿಯ ಚನ್ನಬಸಪ್ಪ ಶಿವಪ್ಪ ಹರವಿ (75) ಕೊಲೆಯಾದ ದುರ್ಧೈವಿ. ಜಾತಿ ಕುರಿತಂತೆ ಕಾಳಂಗಿಯಲ್ಲಿ ವೈಷಮ್ಯದ ವಾತಾವರಣವಿದ್ದು, ಇದೇ ವಿಷಯಕ್ಕೆ ಸಂಬಂಧಿಸಿ ಜಗಳ ನಡೆದಿದೆ ಎನ್ನಲಾಗಿದೆ.
ಕಾಳಂಗಿಯ ಮಹಾಪ್ರಸಾದ ಷಣ್ಮುಖ ಅಂಗಡಿ, ಷಣ್ಮುಖ ಪರಮೇಶ್ವರಪ್ಪ ಅಂಗಡಿ, ಸಿದ್ದಲಿಂಗ ಬಸವಣ್ಣೆಪ್ಪ ಅಗಸನಹಳ್ಳಿ ಕಾಳಂಗಿ ಆರೋಪಿಗಳಾಗಿದ್ದಾರೆ. ಎ.17 ರಂದು ರಾತ್ರಿ ಈ ಘಟನೆ ನಡೆದಿದ್ದು, ಮಹಾಪ್ರಸಾದ ಅಂಗಡಿ ತನ್ನ ತಾಯಿಯೊಂದಿಗೆ ತನ್ನ ಮದುವೆಯ ಲಗ್ನ ಪತ್ರಿಕೆಯನ್ನು ಊರಿನವರಿಗೆ ಹಂಚುತ್ತ ಬರುತ್ತಿರುವಾಗ ಊರಿನ ವಿವಿಧ ಜಾತಿಯ ಮುಖಂಡರೊಂದಿಗೆ ಮಾತಿಗೆ ಮಾತು ಬೆಳೆದು, ಬಡಿಗೆಯಿಂದ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಷಣ್ಮುಖ ಅಂಗಡಿ ಚನ್ನಬಸಪ್ಫನಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಇನ್ನೋರ್ವ ಆರೋಪಿ ಮಹಾಪ್ರಸಾದ ಮನೆಗೆ ಹೋಗಿ ಕಾರು ತಂದು ಚನ್ನಬಸಪ್ಪ ಶಿವಪ್ಪ ಹರವಿ , ರಾಜುಗೌಡ ಸಿದ್ದನಗೌಡ ಪಾಟೀಲ ಮಾಲತೇಶ ಗುತ್ಯಪ್ಪ ಮಡಕೇಶ್ವರ, ನಾಗಪ್ಪ ನಿಂಗಪ್ಪ ಕೋಡಿಕೊಪ್ಪ ಮೇಲೆ ಅಮಾನುಷವಾಗಿ ಕಾರನ್ನು ಹಾಯಿಸಿದ್ದಾನೆ. ತೀವ್ರ ಗಾಯಗೊಂಡ ಚನ್ನಬಸಪ್ಪನನ್ನು ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಟಿ.ಎಸ್.ಎಸ್ ಆಸ್ಪತ್ರೆಗೆ ಸಾಗಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಎ.೧೮ ರಂದು ಮುಂಜಾನೆ ಮೃತಪಟ್ಟಿದ್ದಾನೆ.
ರಾಜುಗೌಡ ಸಿದ್ದನಗೌಡ ಪಾಟೀಲ, ಮಾಲತೇಶ ಗುತ್ಯಪ್ಪ ಮಡಕೇಶ್ವರ, ನಾಗಪ್ಪ ನಿಂಗಪ್ಪ ಕೋಡಿಕೊಪ್ಪ, ಪ್ರಶಾಂತ ಬಸವರಾಜ ಬಾಳಿಹಳ್ಳಿ ಇವರಿಗೆ ಕಾಲು, ಕೈ ಸೋಂಟಕ್ಕೆ ಗಂಭೀರ ಸ್ವರೂಪದ ಗಾಯವಾಗಿದೆ. ಆರೋಪಿಗಳು ನಾಪತ್ತೆಯಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.