ಕಠ್ಮಂಡು: ಪ್ರಪಂಚದ ಮೂರನೇ ಅತಿ ಎತ್ತರ ಶಿಖರ ಏರುತ್ತಿರುವಾಗಲೇ ಭಾರತದ ಪರ್ವತಾರೋಹಿ ಸಾವನ್ನಪ್ಪಿದ್ದಾರೆ. ಸದ್ಯ ಈ ಪರ್ವತ ನೆರೆಯ ದೇಶ ನೇಪಾಳಕ್ಕೆ ಸೇರಿದೆ.
ಹಿಮಾಲಯ ಪರ್ವತವನ್ನು ಹೊಂದಿಕೊಂಡಿರುವ ಕಾಂಚನಜುಂಗಾ ಪರ್ವತ ಏರುವಾಗಲೇ ಪರ್ವತಾರೋಹಿ ನಾರಾಯಣ ಐಯ್ಯರ್ (52) ಸಾವನ್ನಪ್ಪಿದ್ದು, ಈ ವರ್ಷ ಮೃತಪಟ್ಟ ಮೂವರು ಪರ್ವತಾರೋಹಿಗಳಲ್ಲಿ ಒಬ್ಬರಾಗಿದ್ದಾರೆ.
8200 ಮೀಟರ್ ಎತ್ತರವಿರುವ ಕಾಂಚನಜುಂಗಾ ಪರ್ವತವನ್ನು ಪರ್ವತಾರೋಹಿಗಳ ತಂಡ ಏರುತ್ತಿತ್ತು. ಮಾರ್ಗ ಮಧ್ಯದಲ್ಲೇ ಸುಸ್ತಾಗಿ ಬಿದ್ದ ನಾರಾಯಣ ಅಯ್ಯರ್ ಅಲ್ಲೇ ಅಸುನೀಗಿದ್ದಾರೆ, ಇವರಿಗೆ ಇಬ್ಬರಿಂದ ಮಾರ್ಗದರ್ಶನ ನೀಡಲಾಗುತ್ತಿತ್ತು ಎಂದು ತಂಡದ ಪ್ರಮುಖ ನವೀಶ್ ಕರ್ಕಿ ತಿಳಿಸಿದ್ದಾರೆ.
ಸದ್ಯ ಅವರ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದು, ಪರ್ವತದಿಂದ ಮೃತದೇಹವನ್ನು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಇನ್ನು ಈ ವರ್ಷ 68 ವಿದೇಶಿ ಪರ್ವತಾರೋಹಿಗಳಿಗೆ ಮಾತ್ರ ಪರ್ವತ ಏರಲು ನೇಪಾಳ ಸರ್ಕಾರ ಅನುಮತಿ ನೀಡಿತ್ತು ಎಂದು ಅವರು ಹೇಳಿದರು.