ಘಜಿಯಾಬಾದ್: ಯಾವುದಾದರೂ ತುರ್ತು ಸಂದರ್ಭದಲ್ಲಿ ತಕ್ಷಣಕ್ಕೆ ಸಹಾಯ ಬೇಕೆಂದಾಗ ನೆನಪಾಗೋದು ಹೆಲ್ಪ್ಲೈನ್ಗಳು. ಆದರೆ ಕೆಲವೊಮ್ಮೆ ಈ ಹೆಲ್ಪ್ಲೈನ್ಗಳಿಂದ ಮೋಸ ಹೋಗುವ ಸಾಧ್ಯತೆಗಳೂ ಇರುತ್ತದೆ. ಅದಕ್ಕೆ ಸಾಕ್ಷಿಯೆನ್ನುವಂತೆ ಉತ್ತರ ಪ್ರದೇಶದ ಘಜಿಯಾಬಾದ್ನ ರಾಜ್ ನಗರದಲ್ಲಿ ಒಂದು ಘಟನೆ ನಡೆದಿದೆ.
ಅಭಿಷೇಕ್ ಯಾದವ್ ಹೆಸರಿನ ವ್ಯಕ್ತಿ ತನ್ನ ಕಾರನ್ನು ಪಾರ್ಕ್ ಮಾಡಿದ್ದ ಜಾಗದಲ್ಲಿ ಪಾರಿವಾಳವೊಂದು ಬಿದ್ದಿರುವುದನ್ನು ಕಂಡಿದ್ದಾರೆ. ಪೆಟ್ಟಾಗಿ ಬಿದ್ದಿದ್ದ ಆ ಪಾರಿವಾಳವನ್ನು ರಕ್ಷಿಸುವ ಸಲುವಾಗಿ ಗೂಗಲ್ನಲ್ಲಿ ಹೆಲ್ಪ್ಲೈನ್ ಸಂಖ್ಯೆಯನ್ನು ಹುಡುಕಿದ್ದಾರೆ. ಗೂಗಲ್ನಲ್ಲಿ ಸಿಕ್ಕ ಸಂಖ್ಯೆಗೆ ಕರೆ ಮಾಡಿ ನಡೆದಿರುವ ವಿಷಯ ತಿಳಿಸಿ, ಪಾರಿವಾಳವನ್ನು ರಕ್ಷಿಸುವಂತೆ ಕೋರಿದ್ದಾರೆ. ವೈದ್ಯರನ್ನು ಕಳುಹಿಸುತ್ತೇವೆ ಎಂದು ತಿಳಿಸಿದ ಹೆಲ್ಪ್ಲೈನ್ನ ಸಿಬ್ಬಂದಿ ಯುಪಿಐ ಮುಖಾಂತರ 5 ರೂಪಯಿಯನ್ನು ಟೋಕನ್ ಅಮೌಂಟ್ ಆಗಿ ಪಾವತಿಸುವಂತೆ ಕೇಳಿದ್ದಾನೆ. ಅದಕ್ಕೆ ಒಪ್ಪಿದ ಅಭಿಷೇಕ್ಗೆ ಒಂದು ಲಿಂಕ್ ಕಳುಹಿಸಲಾಗಿದೆ. ಅಭಿಷೇಕ್ ಆ ಲಿಂಕನ್ನು ಕ್ಲಿಕ್ಕಿಸಿದ ತಕ್ಷಣ ಆತನ ಬ್ಯಾಂಕ್ ಅಕೌಂಟ್ನಿಂದ 1 ಲಕ್ಷ ಹಣವನ್ನು ಐದು ಇನ್ಸ್ಟಾಲ್ಮೆಂಟ್ಗಳಲ್ಲಿ ತೆಗೆದುಕೊಳ್ಳಲಾಗಿದೆ.
ತನ್ನ ಬ್ಯಾಂಕ್ ಖಾತೆಯಿಂದ ಹಣ ವಿತ್ಡ್ರಾ ಆಗುತ್ತಿದ್ದಂತೆ ಗಾಬರಿಗೊಂಡ ಅಭಿಷೇಕ್ ಪೊಲೀಸರ ಬಳಿ ದೂರು ನೀಡಿದ್ದಾನೆ. ಸಿಹಾನಿ ಗೇಟ್ ಪೊಲೀಸ್ ಠಾಣೆಯ ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ 66ರ ಅನುಸಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪೆಟ್ಟಾಗಿ ಬಿದ್ದಿದ್ದ ಪಾರಿವಾಳಕ್ಕೆ ಪ್ರಥಮ ಚಿಕಿತ್ಸೆಯನ್ನು ಮಾಡಲಾಗಿದ್ದು ಅದನ್ನು ಹಾರಲು ಬಿಡಲಾಗಿದೆ. ಪಾರಿವಾಳವನ್ನು ಗುಣಪಡಿಸಲು ಹೋಗಿ 1 ಲಕ್ಷವನ್ನು ಕಳೆದುಕೊಂಡ ಅಭಿಷೇಕ್ ಮಾತ್ರ ತನ್ನ ಹಣ ವಾಪಾಸು ಬಂದರೆ ಸಾಕು ಎನ್ನುವ ನಿರೀಕ್ಷೆಯಲ್ಲಿ ಕುಳಿತಿದ್ದಾರೆ. (ಏಜೆನ್ಸೀಸ್)
ಕರೊನಾದಲ್ಲೂ ಹೆಚ್ಚುತ್ತಿದೆ ಸೌಂದರ್ಯ ಪ್ರೇಮ; ನೈಲ್ ಆರ್ಟ್ ಮೂಲಕ ಕರೊನಾ ಜಾಗೃತಿ
ವಿಶ್ವದೆಲ್ಲೆಡೆ ಇರುವ ಮಳಿಗೆಗಳನ್ನು ಮುಚ್ಚುವ ನಿರ್ಧಾರ ಘೋಷಿಸಿದ ಸ್ಪೋರ್ಟ್ಸ್ ಕ್ಷೇತ್ರದ ದೈತ್ಯ ಕಂಪನಿ ನೈಕ್