ಪುಣೆ: ವಿಮಾನ ನಿಲ್ದಾಣದ ರನ್ವೇನಲ್ಲಿ ಕಾಣಿಸಿಕೊಂಡ ವ್ಯಕ್ತಿ ಮತ್ತು ಜೀಪನ್ನು ರಕ್ಷಿಸುವ ಸಲುವಾಗಿ ಪೈಲೆಟ್ ವಿಮಾನವನ್ನು ಬೇಗ ಮೇಲೆತ್ತಿದ್ದು, ಆಗ ವಿಮಾನದ ಕೆಳಮೈಗೆ ಹಾನಿಯಾಗಿರುವ ಘಟನೆ ಪುಣೆಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಪುಣೆಯಿಂದ ಶ್ರೀನಗರ ಹೊರಟಿದ್ದ ಎ321 ವಿಮಾನವು ನಿಲ್ದಾಣದಿಂದ ಟೇಕ್ ಆಫ್ ಮಾಡಿಕೊಂಡು ರನ್ ವೇನಲ್ಲಿ ಹೋಗುತ್ತಿತ್ತು. ಆದರೆ ರನ್ವೇನಲ್ಲಿ ಒಬ್ಬ ವ್ಯಕ್ತಿ ಮತ್ತು ಜೀಪು ಕಾಣಿಸಿಕೊಂಡ ಹಿನ್ನೆಲೆ ವ್ಯಕ್ತಿಯನ್ನು ರಕ್ಷಿಸುವ ಸಲುವಾಗಿ ವಿಮಾನದ ಪೈಲೆಟ್ ನಿರ್ದಿಷ್ಟ ಅವಧಿಗಿಂತ ಮೊದಲೇ ವಿಮಾನವನ್ನು ರನ್ವೇನಿಂದ ಮೇಲಕ್ಕೆತ್ತಿದ್ದಾನೆ. ಹಾಗಿದ್ದರೂ ವಿಮಾನದ ಕೆಳ ಮೇಲ್ಮೈಗೆ ಜೀಪು ತಾಗಿದ್ದು ವಿಮಾನಕ್ಕೆ ಸ್ವಲ್ಪ ಪ್ರಮಾಣದ ಹಾನಿಯುಂಟಾಗಿದೆ.
“ರನ್ವೇನಲ್ಲಿ 222ಕಿ.ಮೀ. ವೇಗದಲ್ಲಿ ಹೊರಟಿದ್ದ ವಿಮಾನಕ್ಕೆ ರನ್ವೇನಲ್ಲಿ ವ್ಯಕ್ತಿ ಮತ್ತು ಜೀಪು ಕಾಣಿಸಿಕೊಂಡಿದ್ದರಿಂದ ಪೈಲೆಟ್ ತಕ್ಷಣವೇ ವಿಮಾನವನ್ನು ಮೇಲಕ್ಕೆತ್ತಿದ್ದಾರೆ. ಆದರೂ ಏನೂ ತೊಂದರೆಯಾಗದೆ ವಿಮಾನವು ದೆಹಲಿಗೆ ಬಂದಿಳಿದಿದೆ” ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ತಿಳಿಸಿದ್ದಾರೆ.
ಸದ್ಯ ವಿಮಾನವನ್ನು ಸೇವೆಯಿಂದ ಹಿಂಪಡೆಯಲಾಗಿದ್ದು ತನಿಖೆಗೆ ಒಳಪಡಿಸಲಾಗಿದೆ. ಪುಣೆಯ ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)