More

    ಸ್ವಾತಂತ್ರ್ಯದ ಅಮೃತ ಮಹೋತ್ಸವ: ಪಂಚಪ್ರಾಣ ಸಂಕಲ್ಪಕ್ಕೆ ಕರೆ, ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ…

    ನವದೆಹಲಿ: ದೇಶವು ಇಂದು 75 ವರ್ಷಗಳ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ದೇಶದ ಮೂಲೆ ಮೂಲೆಯನ್ನು ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ದೆಹಲಿಯ ಕೆಂಪುಕೋಟೆಯಲ್ಲಿ 9ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು, ಅವರ ಭಾಷಣದ ಪ್ರಮುಖಾಂಶಗಳು ಈ ಕೆಳಕಂಡಂತಿದೆ.

    ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರಿಗೆ ಕೃತಜ್ಞತೆ
    ಇಂದಿನ ದಿನವನ್ನು ಎಂದೂ ಮರೆಯುವ ಹಾಗಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ನೆನೆಯುವ ದಿನ ಇದಾಗಿದೆ. ಕರ್ತವ್ಯದ ಹಾದಿಯಲ್ಲಿ ತಮ್ಮ ಅಮೂಲ್ಯ ಜೀವ ನೀಡಿದ ಬಾಪು, ನೇತಾಜಿ ಸುಭಾಷ್​ ಚಂದ್ರ ಬೋಸ್​, ಬಾಬಾಸಾಹೇಬ್​ ಅಂಬೇಡ್ಕರ್​, ವೀರ ಸಾವರ್ಕರ್​ ಅವರಿಗೆ ದೇಶದ ನಾಗರಿಕರು ಕೃತಜ್ಞತೆ ಸಲ್ಲಿಸಬೇಕಾದ ದಿನವಿದು ಮತ್ತು ಕೃತಜ್ಞತೆಯನ್ನು ಜನರು ಸಲ್ಲಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

    ಆಜಾದಿ ಕಾ ಅಮೃತ್​ ಮಹೋತ್ಸವ ಸಂದರ್ಭದಲ್ಲಿ ನಾವು ನಮ್ಮ ರಾಷ್ಟ್ರೀಯ ಹೀರೋಗಳನ್ನು ನೆನೆಪಿಸಿಕೊಂಡಿದ್ದೇವೆ. ಆಗಸ್ಟ್​ 14ರಂದು ನಮ್ಮ ಕರಾಳ ವಿಭಜನೆಯನ್ನು ನೆನಪು ಮಾಡಿಕೊಂಡಿದ್ದೇವೆ. ಇಂದು ಕಳೆದ 75 ವರ್ಷಗಳಲ್ಲಿ ನಮ್ಮ ದೇಶವನ್ನು ಮುನ್ನಡೆಸಲು ಕೊಡುಗೆ ನೀಡಿದ ದೇಶದ ಎಲ್ಲಾ ನಾಗರಿಕರನ್ನು ಸ್ಮರಿಸುವ ದಿನವಾಗಿದೆ.

    ನಾರಿ ಶಕ್ತಿ ನೆನೆದ ಪ್ರಧಾನಿ
    ಈ ಸ್ವಾತಂತ್ರ್ಯದ ಸಂಭ್ರಮದ ಕ್ಷಣದಲ್ಲಿ ರಾಣಿ ಲಕ್ಷ್ಮೀಭಾಯಿ, ಝಲ್ಕರಿ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಬೇಗಂ ಹಜರತ್ ಮಹಲ್​ರಂತಹ ಭಾರತದ ಮಹಿಳೆಯರ ಶಕ್ತಿಯನ್ನು ನೆನಪಿಸಿಕೊಂಡಾಗ ಪ್ರತಿ ಭಾರತೀಯರ ಹೃದಯವೂ ಹೆಮ್ಮೆಯಿಂದ ತುಂಬುತ್ತದೆ. ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಬ್ರಿಟಿಷರ ಆಳ್ವಿಕೆಯ ಬುನಾದಿಯನ್ನು ಬುಡಮೇಲು ಮಾಡಿದ ನಮ್ಮ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ಈ ಸಂದರ್ಭದಲ್ಲಿ ಇಡೀ ರಾಷ್ಟ್ರ ಕೃತಜ್ಞತೆ ಸಲ್ಲಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

    ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಾಗಲಿ ಅಥವಾ ರಾಷ್ಟ್ರವನ್ನು ಕಟ್ಟಿದವರಾಗಲಿ, ಡಾ.ರಾಜೇಂದ್ರ ಪ್ರಸಾದ್, ನೆಹರೂ ಜಿ, ಸರ್ದಾರ್ ವಲ್ಲಭ್‌ಭಾಯಿ ಪಟೇಲ್, ಎಸ್​ಪಿ ಮುಖರ್ಜಿ, ಎಲ್​ಬಿ ಶಾಸ್ತ್ರಿ, ದೀನದಯಾಳ್ ಉಪಾಧ್ಯಾಯ, ಜೆಪಿ ನಾರಾಯಣ್, ಆರ್​ಎಂ ಲೋಹಿಯಾ, ವಿನೋಬಾ ಭಾವೆ, ನಾನಾಜಿ ದೇಶಮುಖ್, ಸುಬ್ರಮಣ್ಯ ಭಾರತಿರಂತಹ ಮಹಾನ್ ವ್ಯಕ್ತಿಗಳ ಮುಂದೆ ತಲೆಬಾಗಿ ಕೃತಜ್ಞತೆ ಸಲ್ಲಿಸಬೇಕಾದ ದಿನವಾಗಿದೆ.

    ಭಾರತ ಪ್ರಜಾಪ್ರಭುತ್ವದ ತಾಯಿ. ಭಾರತವು ತನ್ನ 75 ವರ್ಷಗಳ ಪ್ರಯಾಣದಲ್ಲಿ ಅಮೂಲ್ಯವಾದ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅನೇಕ ಸವಾಲುಗಳನ್ನು ಎದುರಿಸಿರುವುದನ್ನು ಸಾಬೀತುಪಡಿಸಿದೆ. ನಮ್ಮ ದೇಶದ ಜನರು ದೇಶಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ. ಯಾವುದೇ ಸಂದರ್ಭದಲ್ಲೂ ತಮ್ಮ ಪ್ರಯತ್ನಗಳನ್ನು ಬಿಡಲಿಲ್ಲ ಮತ್ತು ಅವರ ಸಂಕಲ್ಪಗಳು ಮಸುಕಾಗಲು ಬಿಡಲಿಲ್ಲ ಎಂದು ದೇಶದ ಜನತೆಯನ್ನು ಕೊಂಡಾಡಿದರು.

    ಬುಡುಕಟ್ಟು ಸಮುದಾಯದ ಮೆಚ್ಚುಗೆ
    ನಾವು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುವಾಗ, ಬುಡಕಟ್ಟು ಸಮುದಾಯವನ್ನು ಮರೆಯಲು ಸಾಧ್ಯವಿಲ್ಲ. ಭಗವಾನ್ ಬಿರ್ಸಾ ಮುಂಡಾ, ಸಿಧು-ಕನ್ಹು, ಅಲ್ಲೂರಿ ಸೀತಾರಾಮ ರಾಜು, ಗೋವಿಂದ್ ಗುರು ಸೇರಿದಂತೆ ಸ್ವಾತಂತ್ರ್ಯ ಹೋರಾಟದ ಧ್ವನಿಯಾದ ಅಸಂಖ್ಯಾತ ಹೆಸರುಗಳು ತಮ್ಮ ಬುಡಕಟ್ಟು ಸಮುದಾಯವನ್ನು ದೇಶಕ್ಕಾಗಿ ಬದುಕಲು, ಹೋರಾಡಲು ಮತ್ತು ಪ್ರಾಣ ತ್ಯಾಗಕ್ಕೆ ಪ್ರೇರೇಪಿಸಿದರು ಎಂದು ಮೋದಿ ಹೇಳಿದರು.

    ಭಾರತವು ಮಹತ್ವಾಕಾಂಕ್ಷೆಯ ಸಮಾಜವಾಗಿದ್ದು, ಸಾಮೂಹಿಕ ಮನೋಭಾವದಿಂದ ಬದಲಾವಣೆಗಳನ್ನು ನಡೆಸಲಾಗುತ್ತಿದೆ. ಭಾರತದ ಜನರು ಸಕಾರಾತ್ಮಕ ಬದಲಾವಣೆಗಳನ್ನು ಬಯಸುತ್ತಾರೆ ಮತ್ತು ಅದಕ್ಕೆ ಕೊಡುಗೆ ನೀಡಲು ಬಯಸುತ್ತಾರೆ. ಪ್ರತಿ ಸರ್ಕಾರವು ಈ ಮಹತ್ವಾಕಾಂಕ್ಷೆಯ ಸಮಾಜವನ್ನು ಪರಿಹರಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು.

    ದೇಶದ ಜನತೆಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ
    ಈ 75 ವರ್ಷಗಳ ಪಯಣದಲ್ಲಿ, ಭರವಸೆಗಳು, ಆಕಾಂಕ್ಷೆಗಳು, ಏರಿಳಿತಗಳ ನಡುವೆ ನಾವು ಎಲ್ಲರ ಪ್ರಯತ್ನದಿಂದ ನಾವು ಇಲ್ಲಿದೆ ತಲುಪಿದ್ದೇವೆ. 2014ರಲ್ಲಿ, ನಾಗರಿಕರು ನನಗೆ ಈ ದೇಶದ ಜವಾಬ್ದಾರಿಯನ್ನು ನೀಡಿದರು. ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ವ್ಯಕ್ತಿ ಕೆಂಪು ಕೋಟೆಯಿಂದ ಈ ದೇಶದ ನಾಗರಿಕರನ್ನು ಹಾಡಿ ಹೊಗಳುವ ಅವಕಾಶವನ್ನು ನನಗೆ ನೀಡಿದರು ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ಧನ್ಯವಾದಗಳನ್ನು ತಿಳಿಸಿದರು.

    ಪಂಚಪ್ರಾಣ ಸಂಕಲ್ಪ ಪಠಿಸಿದ ಪ್ರಧಾನಿ
    ಮುಂದಿನ 25 ವರ್ಷಗಳವರೆಗೆ ಐದು ಹೊಸ ಸಂಕಲ್ಪದೊಂದಿಗೆ ಮುನ್ನಡೆಯೋಣ ಎಂದು ಹೇಳಿದ ಪ್ರಧಾನಿ ಮೋದಿ ತಮ್ಮ ಭಾಷಣದ ಪ್ರಮುಖ ಅಂಶವಾಗಿ ಪಂಚಪ್ರಾಣ ಸಂಕಲ್ಪವನ್ನು ಮಾಡಿದರು. ಆ ಐದು ಸಂಕಲ್ಪಗಳು ಈ ಕೆಳಕಂಡಂತಿವೆ.
    ಪಂಚಪ್ರಾಣ-1: 2047ರ ವೇಳೆಗೆ ದೇಶದ ಸಮಗ್ರ ಅಭಿವೃದ್ಧಿ
    ಪಂಚಪ್ರಾಣ-2: ಗುಲಾಮಿ ವ್ಯವಸ್ಥೆಯನ್ನು ಸಂಪೂರ್ಣ ತೊಡೆದು ಹಾಕುವುದು
    ಪಂಚಪ್ರಾಣ-3: ದೇಶದ ಬಗ್ಗೆ ಹಮ್ಮೆ ಮತ್ತು ಗರ್ವ ಹೊಂದುವುದು
    ಪಂಚಪ್ರಾಣ-4: 130 ಕೋಟಿ ದೇಶದ ಜನತೆಯಲ್ಲಿ ಏಕತೆ ಮತ್ತು ಒಗ್ಗಟ್ಟು ಮೂಡಿಸುವು
    ಪಂಚಪ್ರಾಣ-5: ಪ್ರಧಾನಿ, ಮುಖ್ಯಮಂತ್ರಿ ಸೇರಿ ದೇಶದ ನಾಗರಿಕರ ತಮ್ಮ ಕರ್ತವ್ಯವನ್ನು ನಿಭಾಯಿಸುವುದು

    ನಮ್ಮ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆ ಇರಬೇಕು
    ಇಂದು ಡಿಜಿಟಲ್ ಇಂಡಿಯಾ ಉಪಕ್ರಮವನ್ನು ನಾವು ಎಲ್ಲೆಡೆ ನೋಡುತ್ತಿದ್ದೇವೆ. ದೇಶದಲ್ಲಿ ಸ್ಟಾರ್ಟ್‌ಅಪ್‌ಗಳು ಬೆಳೆಯುತ್ತಿವೆ ಮತ್ತು ಶ್ರೇಣಿ 2 ಮತ್ತು 3 ನಗರಗಳಿಂದ ಸಾಕಷ್ಟು ಪ್ರತಿಭೆಗಳು ಬರುತ್ತಿವೆ. ನಮ್ಮ ಸಾಮರ್ಥ್ಯದ ಮೇಲೆ ನಮಗೆ ಸದಾ ನಂಬಿಕೆ ಇರಬೇಕು ಎಂದರು. ಏಕತೆಯನ್ನು ಸಾಧಿಸಲು ಲಿಂಗ ಸಮಾನತೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವಂತೆ ಪ್ರಧಾನಿ ಮೋದಿ ದೇಶದ ಜನತೆಯನ್ನು ಕೇಳಿದರು.

    ನಾನು ನನ್ನನ್ನು ಅರ್ಪಿಸಿಕೊಂಡಿದ್ದೇನೆ
    ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸುವ ಕನಸು ಮತ್ತು ಕಟ್ಟಕಡೆಯ ವ್ಯಕ್ತಿಯನ್ನು ಸಮರ್ಥರನ್ನಾಗಿಸುವ ಆಕಾಂಕ್ಷೆಯನ್ನು ಮಹಾತ್ಮಾ ಗಾಂಧೀಜಿ ಅವರು ಹೊಂದಿದ್ದರು. ಅದಕ್ಕಾಗಿ ನಾನು ನನ್ನನ್ನು ಅರ್ಪಿಸಿಕೊಂಡಿದ್ದೇನೆ. ಆ ಎಂಟು ವರ್ಷಗಳು ಮತ್ತು ಹಲವಾರು ವರ್ಷಗಳ ಸ್ವಾತಂತ್ರ್ಯದ ಅನುಭವದ ಪರಿಣಾಮವಾಗಿ ನಾನು 75 ವರ್ಷಗಳ ಸ್ವಾತಂತ್ರ್ಯದ ಸಾಮರ್ಥ್ಯವನ್ನು ನೋಡಬಲ್ಲೆ ಎಂದು ಪ್ರಧಾನಿ ಮೋದಿ ಹೇಳಿದರು.

    ಜೈ ಅನುಸಂಧಾನ್​
    ಲಾಲ್ ಬಹದ್ದೂರ್ ಶಾಸ್ತ್ರಿಯವರ ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ನಂತರ, ವಾಜಪೇಯಿ ಅವರು ಈ ಘೋಷಣೆಗೆ ‘ಜೈ ವಿಜ್ಞಾನ’ ಸೇರಿಸಿದರು. ಈಗ, ಸೇರಿಸಲು ಇನ್ನೊಂದು ಅವಶ್ಯಕತೆಯಿದೆ ಅದೇನೆಂದರೆ, ‘ಜೈ ಅನುಸಂಧಾನ್​’ (ಸಂಶೋಧನೆ ಮತ್ತು ನಾವೀನ್ಯತೆ). ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಔರ್ ಜೈ ಅನುಸಂಧಾನ ಎಂದು ಪ್ರಧಾನಿ ಮೋದಿ ಘೋಷಿಸಿದರು.

    5ಜಿ ಗಾಗಿ ಕಾಯುವಿಕೆ ಮುಗಿದಿದೆ
    ಸ್ವಾತಂತ್ರ್ಯದ ನಂತರ ಭಾರತವು ಮೊದಲ ಬಾರಿಗೆ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯ ಕೋಟೆಯಿಂದ ಮೇಡ್ ಇನ್ ಇಂಡಿಯಾದ ಫಿರಂಗಿ ಅಬ್ಬರವನ್ನು ಕೇಳಿದೆ. ಮಕ್ಕಳು ಕೂಡ ವಿದೇಶಿ ನಿರ್ಮಿತ ಆಟಿಕೆಗಳನ್ನು ತಿರಸ್ಕರಿಸಿದ್ದಾರೆ. ಆತ್ಮನಿರ್ಭರ ಭಾರತದ ಉತ್ಸಾಹವು ಅವರ ರಕ್ತನಾಳಗಳ ಮೂಲಕ ಹರಿಯುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ನವೀಕರಿಸಬಹುದಾದ ಇಂಧನದಿಂದ ವೈದ್ಯಕೀಯ ಶಿಕ್ಷಣಕ್ಕೆ ಮೂಲಸೌಕರ್ಯವನ್ನು ಹೆಚ್ಚಿಸುವವರೆಗೆ, ನಾವು ಪ್ರತಿಯೊಂದು ರಂಗದಲ್ಲೂ ಸುಧಾರಿಸಿದ್ದೇವೆ. 5ಜಿ ಗಾಗಿ ಕಾಯುವಿಕೆ ಮುಗಿದಿದೆ. ಡಿಜಿಟಲ್ ಇಂಡಿಯಾ ಈಗ ಪ್ರತಿ ಹಳ್ಳಿಗೂ ತಲುಪಲಿದೆ. ನಮ್ಮಲ್ಲಿ ಡಿಜಿಟಲ್ ಉದ್ಯಮಿಗಳು ಹಳ್ಳಿಗಳಿಂದ ಬರುತ್ತಿದ್ದಾರೆ ಎಂದು ಜನರು ಆಶ್ಚರ್ಯ ಪಡುತ್ತಾರೆ ಎಂದರು.

    LIVE| ಸ್ವಾತಂತ್ರ್ಯದ ಅಮೃತ ಮಹೋತ್ಸವ: 9ನೇ ಬಾರಿ ಧ್ವಜಾರೋಹಣ ನೆರವೇರಿಸಿ, ಪ್ರಧಾನಿ ಮೋದಿ ಭಾಷಣ ಆರಂಭ

    30 ಸಾವಿರ ರಾಷ್ಟ್ರಧ್ವಜ ವಿತರಿಸಿ “ಹರ್‌ ಘರ್‌ ತಿರಂಗಾ” ಅಭಿಯಾನಕ್ಕೆ ಬಯೋಕಾನ್ ಫೌಂಡೇಷನ್‌ ಬೆಂಬಲ

    ಭಾರತ-2047: ಭರವಸೆಯ ದಿಕ್ಕು, ಹೊಸ ಹೊಳಹು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts