ದೇವದುರ್ಗ: ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಬಹುಸಂಖ್ಯಾತರಿಗೆ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ನ್ಯಾಯ ಸಿಕ್ಕಿಲ್ಲ ಎಂದು ಅಕ್ಕಾ ಐಎಎಸ್ ಅಕಾಡೆಮಿಯ ಅಧ್ಯಕ್ಷ ಡಾ.ಶಿವಕುಮಾರ್ ಕಳವಳ ವ್ಯಕ್ತಪಡಿಸಿದರು.
ಬಹುಸಂಖ್ಯಾತರಿಗೆ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ನ್ಯಾಯ ಸಿಕ್ಕಿಲ್ಲ
ಪಟ್ಟಣದ ಮುರಿಗೆಪ್ಪ ಖೇಣೇದ್ ಸಭಾಂಗಣದಲ್ಲಿ ಬಹುಜನ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮ 75ನೇ ಮನೆ ತುಂಬಿದ ಕುಟುಂಬಸ್ಥರಿಗೆ ಸನ್ಮಾನ ಮತ್ತು ಬೃಹತ್ ಸಮಾವೇಶ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಇಂದಿಗೂ ದೇಶವ್ಯಾಪ್ತಿ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ತಾಂಡವವಾಡುತ್ತಿದೆ ಎಂದರು.
ಇದನ್ನೂ ಓದಿ: ಬೆಸ್ಕಾಂ ಸಮಸ್ಯೆಗೂ ಪೊಲೀಸ್ ಕಂಟ್ರೋಲ್ ರೂಮ್ 112ಗೆ ಕರೆ ಮಾಡಿ; ಬಿ. ದಯಾನಂದ್ ಸಲಹೆ
ಬಾಬಾಸಾಹೇಬ ಅಂಬೇಡ್ಕರ್ ಕಂಡ ಕನಸಿನಂತೆ ದೇಶದ ವ್ಯವಸ್ಥೆ ಸುಧಾರಿಸಿಲ್ಲ. ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೊಳಿಸಿದ್ದರೆ ಕೇವಲ 20 ವಷರ್ದಲ್ಲಿ ಭಾರತ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುತ್ತಿತ್ತು. ಒಂದು ವೇಳೆ ಅದನ್ನು ಸಾಧಿಸಲು ಆಗದಿದ್ದರೇ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ ಎಂಬುದು ಅಂಬೇಡ್ಕರ್ ಅಭಿಪ್ರಾಯವಾಗಿತ್ತು ಎಂದು ಹೇಳಿದರು.
ಇಂದಿಗೂ ಶೇ.98 ಆಸ್ತಿ, ಅಧಿಕಾರ, ಸಂಪತ್ತು, ಭೂಮಿ ಮತ್ತು ಕೈಗಾರಿಕೆ ಉದ್ಯಮಗಳು ಕೇವಲ ಶೇ.2 ವರ್ಗದ ಜನರಲ್ಲಿದೆ. ದಲಿತರಿಗೆ ಕೇವಲ ಸರ್ಕಾರಿ ವಲಯದಲ್ಲಿ ಮಾತ್ರ ಮೀಸಲಾತಿ ದೊರೆತಿದೆ. ಆದರೆ ಕೃಷಿ ವಲಯದಲ್ಲಿ ಭೂಮಿ, ಖಾಸಗಿ ಸೇವಾ ವಲಯದಲ್ಲಿ ವ್ಯಾಪಾರ, ಕೈಗಾರಿಕೆ, ಸಂಪತ್ತಿನ ಹಕ್ಕುಗಳು ದೊರೆಯದೆ ಬಹು ಜನರು ಇಂದಿಗೂ ಬಡವರಾಗಿಯೇ ಉಳಿದಿದ್ದಾರೆ ಎಂದರು.
ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮ 75 ಮನೆಗಳನ್ನು ಪೂರೈಸಿದ ಅಂಗವಾಗಿ ಕುಟುಂಬಸ್ಥರಿಗೆ ಸನ್ಮಾನಿಸಲಾಯಿತು. ವರಜ್ಯೋತಿ ಭಂತೇಜಿ, ಅರವಿನ ಮನೆಯ ಬಸವ ದೇವರು ಸಾನ್ನಿಧ್ಯವಹಿಸಿದ್ದರು.