ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ತೆಲುಗಿನ ಮೆಗಾ ಕುಟುಂಬದ ನಡುವೆ ಇರುವ ಅನುಬಂಧ ತುಂಬಾನೆ ವರ್ಷಗಳದ್ದು. ಅಪ್ಪು ನಿಧನರಾದಾಗ ನಟ ಚಿರಂಜೀವಿ ಅವರ ಅಂತಿಮ ದರ್ಶನ ಪಡೆದರು. ನಂತರ, ನಟ ರಾಮ್ ಚರ್ಣ್ ತೇಜ್ ಅಂತಿಮ ದರ್ಶನ ಪಡೆಯದಿದ್ದರೂ, ಕೆಲವು ದಿನಗಳ ನಂತರ ಅಪ್ಪು ಮನೆಗೆ ಆಗಮಿಸಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಸಾಂತ್ವನ ಹೇಳಿದರು. ಆದರೆ, ಅಪ್ಪು ನಿಧನದ ಬಳಿಕ ನಟ ಅಲ್ಲು ಅರ್ಜುನ್ ಮಾತ್ರ ಪುನೀತ್ ಅವರ ಅಂತಿಮ ದರ್ಶನವೂ ಪಡೆಯಲಿಲ್ಲ ಅಥವಾ ಅವರ ಮನೆಗೂ ಹೋಗಿರಲಿಲ್ಲ. ಆಪ್ತ ಗೆಳೆಯನ ನಿಧನದ ಬಳಿಕ ಅಲ್ಲು ಅರ್ಜುನ್ ಅವರ ಈ ನಡೆಯ ಬಗ್ಗೆ ಎಲ್ಲರಿಗೂ ಬೇಸರವಿತ್ತು. ಆದರೆ, ಈ ಬೇಸರಕ್ಕೆ ಈಗ ಸ್ಟೈಲಿಶ್ ಸ್ಟಾರ್ ಉತ್ತರ ಕೊಟ್ಟಿದ್ದಾರೆ.
ಡಿ.15 ರಂದು ‘ಪುಷ್ಪ‘ ಸಿನಿಮಾ ಪತ್ರಿಕಾಗೋಷ್ಠಿಗೆಂದು ಸ್ಟೈಲಿಶ್ ಸ್ಟಾರ್ ಬೆಂಗಳೂರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರು ನಟನನ್ನು ಅಪ್ಪು ಅವರ ಮನೆಗೆ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿದರೆ ಅವರು ಒಂದೊಳ್ಳೆ ಉತ್ತರ ಕೊಟ್ಟಿದ್ದು, ಅದು ಸದ್ಯ ಎಲ್ಲರ ಗಮನ ಸೆಳೆದಿದೆ. ”ಇಷ್ಟು ದಿನ ನಾನು ‘ಪುಷ್ಪ‘ ಸಿನಿಮಾದ ಕೆಲಸದ ಒತ್ತಡದಲ್ಲಿ ಇದ್ದೆ. ಹಾಗಾಗಿ, ಅಪ್ಪು ಮನೆಗೆ ಹೇಗಲು ಸಾಧ್ಯವಾಗಿಲ್ಲ” ಎಂದು ಹೇಳಿದರು. ಜೊತೆಗೆ, ಅಪ್ಪು ಅವರ ಮನೆಗೆ ನೆನ್ನೆನು ಹೋಗಲ್ಲ ಎಂದಿದ್ದಾರೆ. ಏಕೆಂದರೆ, ”ಸಿನಿಮಾದ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದು ಈಗ ಪುನೀತ್ ಮನೆಗೆ ಹೋದರೆ, ಅದು ಪ್ರಚಾರದ ಗಿಮ್ಮಿಕ್ಕು ಎಂದು ಭಾವಿಸುತ್ತಾರೆ ಜನ”.
ಹಾಗಾಗಿ, ‘ಪುಷ್ಪ‘ ಸಿನಿಮಾ ಬಿಡುಗಡೆಯಾದ ನಂತರ, ಚಿತ್ರದ ಎಲ್ಲಾ ಕೆಲಸಗಳು ಮುಗಿದ ನಂತರ ಒಂದು ದಿನ ಬಿಡುವು ಮಾಡಿಕೊಂಡು ಅಶ್ವಿನಿ ಅವರ ಮನೆಗೆ ತಪ್ಪದೆ ಹೋಗುವೆ” ಎಂದು ತಿಳಿಸಿದ್ದಾರೆ. ಅಲ್ಲು ಅರ್ಜುನ್ ಅವರ ಈ ಉತರಕ್ಕೆ ಪತ್ರಿಕಾಗೋಷ್ಠಿಯಲ್ಲಿ ಒಬ್ಬರು ಸೂಪರ್ ಸರ್ ಎಂದರು. ಹಾಗೆ ಹೇಳಿದ ವ್ಯಕ್ತಿಗೆ ಕೂಡ ಉತ್ತರಿಸಿದ ನಟ, ”ಸೂಪರ್ ಅಲ್ಲ ಸರ್… ಅದು ನನ್ನ ಕರ್ತವ್ಯ. ಇದು ಪುನೀತ್ ಬಗೆಗೆ ನನಗೆ ಇರುವ ಗೌರವ” ಎಂದು ಹೇಳಿದ್ದರು. ಇದಕ್ಕೆ ಅಲ್ಲಿದ್ದ ವ್ಯಕ್ತಿಗಳು ಚಪ್ಪಾಳೆ ಹೊಡೆದರು. ಇದಕ್ಕೂ ಮುನ್ನ ಸಹ ಅಲ್ಲು ಅರ್ಜುನ್ ಅಪ್ಪು ಅವರ ನಿಧನದ ಬಗ್ಗೆ ಒಂದು ತೆಲುಗಿನ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಬೇಸರ ವ್ಯಕ್ತಪಡಿಸಿದರು.