ಬೆಂಗಳೂರು: ಲಾಕ್ಡೌನ್ ನಡುವೆಯೂ ರಾಜ್ಯಾದ್ಯಂತ ಅಕ್ಷಯ ತೃತೀಯಕ್ಕೆ 45 ಕೋಟಿ ರೂ.ಗೂ ಅಧಿಕ ವಹಿವಾಟು ನಡೆದಿದೆ. ಕರೊನಾ ಸೋಂಕು ಹರಡುವ ಭೀತಿ ಕಾರಣ ಈ ಬಾರಿ ಆನ್ಲೈನ್ನಲ್ಲಿ ಚಿನ್ನಾಭರಣ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ಗ್ರಾಹಕರು ತಮ್ಮಿಷ್ಟದ ಆಭರಣ ಆಯ್ಕೆ ಮಾಡಿ ರಸೀದಿ ಪಡೆದಿದ್ದಾರೆ. ದಿಗ್ಬಂಧನ ಮುಕ್ತಾಯವಾಗಿ ಸಹಜ ಸ್ಥಿತಿಗೆ ಮರಳಿದ ಆಭರಣಗಳನ್ನು ಜನರು ಪಡೆಯಲಿದ್ದಾರೆ ಎಂದು ರಾಜ್ಯ ಆಭರಣ ವರ್ತಕರ ಸಂಘ ತಿಳಿಸಿದೆ.
ಆಭರಣ ವಿಮೆ: ಚಿನ್ನಾಭರಣದ ಮೇಲೆ ಇದೇ ಮೊದಲ ಬಾರಿಗೆ ವಿಮೆ ಮಾಡಿಸಿದ್ದರಿಂದ ಸ್ವಲ್ಪ ಮಟ್ಟಿಗೆ ವ್ಯಾಪಾರ ವಹಿವಾಟು ನಡೆದಿದೆ. ಇದಲ್ಲದೆ ಮೊದಲೇ ನಿಗದಿಪಡಿಸಿದಂತೆ ಚಿನ್ನಾಭರಣಕ್ಕಾಗಿ ಮಾಸಿಕ ಕಂತಿನಲ್ಲಿ ಹಣ ಕಟ್ಟಿದ್ದ ಗ್ರಾಹಕರ ಮನೆಗೆ ಆಭರಣಗಳನ್ನು ತಲುಪಿಸಲಾಗಿದೆ.
1 ಗ್ರಾಂ ಚಿನ್ನದ ನಾಣ್ಯ ಪಾರ್ಸೆಲ್: ಕೆಲ ಚಿನ್ನದ ವ್ಯಾಪಾರಿಗಳು ಮಾಸ್ಕ್, ಸ್ಯಾನಿಟೈಸರ್ ಜತೆ 1 ಗ್ರಾಂ ಚಿನ್ನದ ನಾಣ್ಯವನ್ನು ಗ್ರಾಹಕರಿಗೆ ಪಾರ್ಸೆಲ್ ಮಾಡಿದರು. ಇನ್ನು ಕೆಲ ಗ್ರಾಹಕರು ಮಳಿಗೆ ಸಿಬ್ಬಂದಿಗೆ ವಿಡಿಯೋ ಕಾಲ್ ಮೂಲಕ ಆಭರಣ ಬುಕ್ ಮಾಡಿದರು.
ರಾಜಧಾನಿಯಲ್ಲಿ ಕೆಲವೆಡೆ ಮಳಿಗೆಗಳನ್ನು ತೆರೆದರೆ, ಹಲವೆಡೆ ತೆರೆಯುವ ಗೋಜಿಗೆ ಹೋಗಲಿಲ್ಲ. ಈ ಹಿನ್ನೆಲೆಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ವಹಿವಾಟು ನಡೆದಿದೆ ಎಂದು ಸಂಘದ ಮೂಲಗಳು ತಿಳಿಸಿವೆ.