ಮುಂಬೈ: ಅಕ್ಷಯ್ ಕುಮಾರ್ ಕೈಯಲ್ಲಿ ‘ಸೆಲ್ಫಿ’, ‘ಓ ಮೈ ಗಾಡ್ 2’, ‘ಕ್ಯಾಪ್ಸೂಲ್ ಗಿಲ್’, ‘ಸೂರರೈ ಪೊಟ್ರು’ ಚಿತ್ರದ ರೀಮೇಕ್ … ಹೀಗೆ ಒಂದಿಷ್ಟು ಚಿತ್ರಗಳು ಇವೆ. ಇದೆಲ್ಲದರ ಮಧ್ಯೆ, ಅಕ್ಷಯ್ ಮರಾಠಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ‘ವೀರ್ ದೌದಲೆ ಸಾಥ್’ ಎಂಬ ಹೊಸ ಮರಾಠಿ ಚಿತ್ರದಲ್ಲಿ ಛತ್ರಪತಿ ಶಿವಜಿ ಮಹರಾಜರ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ.
ಇದನ್ನೂ ಓದಿ: ಡ್ರೋನ್ ಪ್ರತಾಪ್ ನಾನು ಒಂದೇ ತಾಯಿಯ ಮಕ್ಕಳಿದ್ದಂಗೆ, ನಾನು ಹುಣ್ಣಿಮೇಲಿ ಹುಟ್ಟಿದೆ ಆತ ಹುಟ್ಟಿದಾಗ ಕರೆಂಟ್ ಹೋಗಿತ್ತು’
ಮುಂಬೈನಲ್ಲಿ ಬುಧವಾರ ರಾತ್ರಿ ನಡೆದ ಸಮಾರಂಭದಲ್ಲಿ, ಮಹೇಶ್ ಮಂಜ್ರೇಕರ್ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ವಿಶೇಷವೆಂದರೆ, ಈ ಚಿತ್ರದಲ್ಲಿ ನಟಿಸುತ್ತಿರುವ ವಿಷಯವಿರಲಿ, ಚಿತ್ರದ ಘೋಷಣೆ ಸಮಾರಂಭದಲ್ಲಿ ಅವರು ಭಾಗವಹಿಸಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆಹ್ವಾನ ಪತ್ರಿಕೆಯಲ್ಲೂ ಅಕ್ಷಯ್ ಕುಮಾರ್ ಅವರ ಹೆಸರು ಇರಲಿಲ್ಲ. ಹೀಗಿರುವಾಗಲೇ, ಅಕ್ಷಯ್ ಸಮಾರಂಭಕ್ಕೆ ಹಾಜರಾಗುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಕಡೆಗೆ ಗೊತ್ತಾಗಿದ್ದೇನೆಂದರೆ, ಈ ಚಿತ್ರದಲ್ಲಿ ಶಿವಾಜಿ ಮಹಾರಾಜರ ಪಾತ್ರವನ್ನು ಅವರೇ ನಿರ್ವಹಿಸುತ್ತಿದ್ದಾರೆ ಎಂದು.
ಈ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಥಾಕರೆ ಸಹ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.
ಇದನ್ನೂ ಓದಿ: ನ.06ಕ್ಕೆ ಪ್ರಾರಂಭವಾಗಲಿದೆ ಧನಂಜಯ್ ಅಭಿನಯದ ಹೊಸ ಚಿತ್ರ ‘ಉತ್ತರಕಾಂಡ’
‘ವೀರ್ ದೌದಲೆ ಸಾಥ್’ ಚಿತ್ರವು ಬರೀ ಮರಾಠಿಗಷ್ಟೇ ಸೀಮಿತವಾಗಿರುವುದಿಲ್ಲ. ಹಿಂದಿ, ತಮಿಳು ಮತ್ತು ತೆಲುಗಿಗೂ ಡಬ್ ಆಗಿ ಬಿಡುಗಡೆ ಆಗಲಿದೆ. ವಸೀಮ್ ಖುರೇಷಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, 2023ರ ದೀಪಾವಳಿಗೆ ಚಿತ್ರ ಬಿಡುಗಡೆಯಾಗಲಿದೆ.