ಮುಂಬೈ: ಬಾಲಿವುಡ್ನ ಜನಪ್ರಿಯ ಕಾಂಬಿನೇಷನ್ಗಳ ಪೈಕಿ ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಅವರ ಜೋಡಿ ಸಹ ಒಂದು. ‘ಹೇರಾ ಫೇರಿ’ ಚಿತ್ರದ ಮೂಲಕ ಪ್ರಾರಂಭವಾದ ಇವರಿಬ್ಬರ ಜತೆಯಾಟ, ನಂತರದ ವರ್ಷಗಳಲ್ಲಿ ‘ಗರಮ್ ಮಸಾಲ’, ‘ಭೂಲ್ ಭುಲಯ್ಯಾ’, ‘ಭಾಗಂ ಭಾಗ’, ‘ಧೇ ಧನಾ ಧನ್’ ಮತ್ತು ‘ಕಟ್ಟಾ ಮೀಠಾ’ ಮುಂತಾದ ಚಿತ್ರಗಳಲ್ಲಿ ಮುಂದುವರೆಯಿತು.
ಇದನ್ನೂ ಓದಿ: ‘ಸಿ’ ಗ್ರೇಡ್ ಚಿತ್ರಗಳ ವಿಮರ್ಶೆ ಮಾಡುವುದಿಲ್ಲವಂತೆ ಕೆಆರ್ಕೆ …
‘ಆಪ್ತಮಿತ್ರ’ ಚಿತ್ರದ ರೀಮೇಕ್ ಆದ ‘ಭೂಲ್ ಭುಲಯ್ಯಾ ನಂತರ ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್, ಜತೆಯಾಗಿ ಚಿತ್ರ ಮಾಡಿರಲಿಲ್ಲ. ಇದೀಗ ಒಂದು ದಶಕದ ನಂತರ ಇವರಿಬ್ಬರೂ ಜತೆಯಾಗಿ ಚಿತ್ರ ಮಾಡಲಿದ್ದು, ಮುಂದಿನ ವರ್ಷ ಪ್ರಾರಂಭವಾಗಲಿದೆ. ಈ ವಿಷಯವನ್ನು ಸ್ವತಃ ಪ್ರಿಯದರ್ಶನ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ, ಅಕ್ಷಯ್ ಕುಮಾರ್ ಅಭಿನಯದ ‘ರಕ್ಷಾ ಬಂಧನ್’ ಚಿತ್ರದ ಸೆಟ್ಗೆ ಭೇಟಿ ಕೊಟ್ಟಿರುವ ಪ್ರಿಯದರ್ಶನ್, ಅಲ್ಲಿ ಅಕ್ಷಯ್ ಜತೆಗೆ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತುಕಥೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಸೆಟ್ನಲ್ಲಿ ಅಕ್ಷಯ್ ಜತೆಗಿರುವ ಒಂದು ಫೋಟೋ ಸಹ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ಮಿಡಿದ ಕಾವ್ಯಾ ಮನ; ನಟಿಯಿಂದ ಕೂದಲು ದಾನ..
ಈ ಕುರಿತು ಮಾತನಾಡಿರುವ ಅವರು, ‘ನಾವಿಬ್ಬರೂ ಒಟ್ಟಿಗೆ ಚಿತ್ರ ಮಾಡುವುದು ಖಚಿತವಾಗಿದೆ. ಇದೊಂದು ಔಟ್ ಆಂಡ್ ಔಟ್ ಕಾಮಿಡಿ ಚಿತ್ರವಾಗಿದ್ದು, ಕ್ಲೈಮ್ಯಾಕ್ಸ್ನಲ್ಲಿ ಸಾಕಷ್ಟು ಸೆಂಟಿಮೆಂಟ್ ಸಹ ಇದೆ. ಇಷ್ಟರಲ್ಲಾಗಲೇ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಲಾಕ್ಡೌನ್ನಿಂದ ಎಲ್ಲವೂ ಮುಂದಕ್ಕೆ ಹೋಗಿದೆ. ಈಗಾಗಲೇ ಕಥೆ ರೆಡಿಯಾಗಿದೆ. ಇದು ಹಿಂದಿನ ಚಿತ್ರಗಳ ತರಹ ರೀಮೇಕ್ ಅಲ್ಲ. ಇದೊಂದು ಸ್ವಮೇಕ್ ಚಿತ್ರವಾಗಿದ್ದು, ನಟನೆಯ ಜತೆಗೆ ನಿರ್ಮಾಣದಲ್ಲೂ ಅಕ್ಷಯ್ ತೊಡಗಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಯಾರ್ಯಾರು ಹಣ ಹಾಕುತ್ತಾರೆ ಎಂಬುದನ್ನು ಅವರೇ ಸದ್ಯದಲ್ಲೇ ಅಧಿಕೃತವಾಗಿ ಹೇಳಲಿದ್ದಾರೆ’ ಎಂದು ಪ್ರಿಯದರ್ಶನ್ ಹೇಳಿಕೊಂಡಿದ್ದಾರೆ.