ಚಿಕ್ಕೋಡಿ (ಬೆಳಗಾವಿ): ‘ಕರ್ನಾಟಕ ಅವರಪ್ಪಂದಲ್ಲ, ನಮ್ಮದು..’ ಮಹಾರಾಷ್ಟ್ರ ಡಿಸಿಎಂಗೆ ಅಜಿತ್ ಪವಾರ್ಗೆ ಸಚಿವ ಪ್ರಭು ಚವ್ಹಾಣ ಹಿಂದಿಯಲ್ಲಿ ಭಾಷೆಯಲ್ಲಿ ಟಾಂಗ್ ನೀಡಿದ್ದಾರೆ.
ನಿಪ್ಪಾಣಿ ಹಾಗೂ ಕಾರವಾರ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದೆ ಎಂದು ಮಹಾರಾಷ್ಟ್ರ ಸಚಿವ ಪವಾರ್ ಹೇಳಿದ್ದರು. ಈ ಕುರಿತು ನಿಪ್ಪಾಣಿಯಲ್ಲಿ ಪ್ರತಿಕ್ರಿಯಿಸಿದ ಪ್ರಭು ಚವ್ಹಾಣ, ಅವರು ಏನ್ ಹೇಳಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ, ಕರ್ನಾಟಕ ಮಾತೆ ನಮ್ಮ ತಾಯಿ. ನಮ್ಮ ಜಿಲ್ಲೆಗಳು ಅವರಿಗೆ ಸಂಬಂಧವಿಲ್ಲ. ನಮ್ಮ ತಾಯಿಯನ್ನು ರಕ್ಷಿಸಿಕೊಳ್ಳುವುದು ಹೇಗೆ ಎನ್ನುವುದು ನಮಗೆ ಗೊತ್ತಿದೆ. ಪವಾರ್ ಮಾತಿಗೆ ಬೆಲೆ ಕೊಡುವ ಅವಶ್ಯಕತೆಯಿಲ್ಲ ಎಂದು ಖಾರವಾಗಿ ಉತ್ತರಿಸಿದರು.
ಗಡಿ ಸಚಿವರ ನೇಮಕ: ಗಡಿ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಸಹಕಾರ ಸಚಿವ ಸೋಮಶೇಖರ್, ನೆರೆಯ ಮಹಾರಾಷ್ಟ್ರ ರಾಜ್ಯ ಪದೇಪದೆ ಗಡಿ ಕ್ಯಾತೆ ತೆಗೆಯುತ್ತಿರುತ್ತದೆ. ಹೀಗಾಗಿ ನ್ಯಾಯಾಲಯಗಳಲ್ಲಿ ಸಮರ್ಪಕವಾಗಿ ವಾದ ಮಂಡನೆಗೆ ಪೂರಕ ದಾಖಲೆಗಳ ಸಂಗ್ರಹ, ಗಡಿ ಭಾಗದಲ್ಲಿ ಕನ್ನಡಿಗರ ರಕ್ಷಣೆ ಮಾಡುವ ಉದ್ದೇಶದಿಂದ ಸರ್ಕಾರ ಶ್ರೀಘ್ರವೇ ಪ್ರತ್ಯೇಕ ಸಚಿವರೊಬ್ಬರನ್ನು ನೇಮಿಸಲಿದೆ. ಈ ಸಂಬಂಧ ಮುಖ್ಯಮಂತ್ರಿಗಳು ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು, ಸಚಿವರೊಂದಿಗೆ ಚರ್ಚಿಸಿ ಹಂತ ಹಂತವಾಗಿ ಕ್ರಮ ವಹಿಸಲಿದ್ದಾರೆ ಎಂದರು.
ಮಹಾರಾಷ್ಟ್ರದಲ್ಲಿ ಚುನಾವಣೆ ಎದುರಾದ ಸಂದರ್ಭ ಅಲ್ಲಿನ ನಾಯಕರು ರಾಜಕೀಯ ಉದ್ದೇಶದಿಂದ ಭಾಷೆಯ ಕುರಿತು ಹೇಳಿಕೆ ನೀಡುತ್ತಾರೆ. ಅವರ ಹೇಳಿಕೆಗಳಿಗೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಗಿಮಿಕ್ ರಾಜಕಾರಣಿ ಎಂದು ಸಚಿವ ಸೋಮಶೇಖರ್ ವ್ಯಂಗ್ಯವಾಡಿದರು.