ಎನ್.ಆರ್.ಪುರ: ಏಡ್ಸ್ ನಿಯಂತ್ರಣದಲ್ಲಿ ಆರೋಗ್ಯ ಶಿಕ್ಷಣದ ಪಾತ್ರ ಮಹತ್ವವಾಗಿದೆ ಎಂದು ಡಾ.ವಿನಯ್ ಹೇಳಿದರು.
ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರ, ಕಾನೂರು ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಕಾನೂರು ಗ್ರಾಪಂನಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಏಡ್ಸ್ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ,ಏಡ್ಸ್ ರೋಗಕ್ಕೆ ಯಾವುದೇ ಚಿಕಿತ್ಸೆ ಅಥವಾ ತಡೆಗಟ್ಟುವ ಲಸಿಕೆ ಕಂಡುಹಿಡಿದಿಲ್ಲ. ಆದರೂ ಈ ಕಾಯಿಲೆಯನ್ನು ಕೇವಲ ಆರೋಗ್ಯ ಶಿಕ್ಷಣ ನೀಡಿ ನಿಯಂತ್ರಿಸಲಾಗಿದೆ. ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರದಿಂದ ಮನುಕುಲ ನಾಶ ಮಾಡಬಹುದಾದ ಏಡ್ಸ್ ವಿರುದ್ಧ ಜಯ ಸಾಧಿಸಲಾಗಿದೆ. ಎಚ್ಐವಿ ಹರಡುವುದು ಮತ್ತು ಲಕ್ಷಣದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಮಾಹಿತಿ ನೀಡಿ, ಎಚ್ಐವಿ ವೈರಸ್ ಏಡ್ಸ್ ಕಾಯಿಲೆ ಉಂಟುಮಾಡುತ್ತದೆ. ಈ ವೈರಸ್ ಎಚ್ಐವಿ ಪೀಡಿತ ವ್ಯಕ್ತಿಗಳೊಡನೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಎಚ್ಐವಿ ಸೋಂಕಿತ ಸೂಜಿ ಸಿರಂಜ್ ಬಳಕೆಯಿಂದ ಎಚ್ಐವಿ ಸೋಂಕಿತ ರಕ್ತ ಪಡೆಯುವುದರಿಂದ, ಸೋಂಕಿತ ತಾಯಿಯಿಂದ ಮಗುವಿಗೆ ಮಾತ್ರ ಹರಡುತ್ತದೆ ಎಂದರು.
ಎಚ್ಐವಿ ಪೀಡಿತರನ್ನು ಆರೈಕೆ ಮಾಡುವುದು ಎಲ್ಲರ ಕರ್ತವ್ಯ. ಸಂಶಯವಿರುವ ಸಾರ್ವಜನಿಕರು ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿ. ತಮ್ಮ ಸ್ಥಿತಿಗತಿಗಳನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಮನೋಹರ್ ಮಾತನಾಡಿ, ಚುನಾಯಿತ ಜನಪ್ರತಿನಿಧಿಗಳು ಆರೋಗ್ಯ ಇಲಾಖೆ ಎಲ್ಲ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವ ಜತೆಗೆ ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ ಎಂಬ ಆಶಯ ಸಾಕಾರಗೊಳಿಸಲು ಸಹಕರಿಸುವುದಾಗಿ ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷೆ ಮೋಹಿನಿ, ಪಿಡಿಒ ಶ್ರೀನಿವಾಸ್, ಆರೋಗ್ಯ ಇಲಾಖೆಯ ಪವನ್ಕರ್, ಐಸಿಟಿಸಿ ಆಪ್ತ ಸಮಾಲೋಚಕಿ ಸುಜಾತಾ ಇದ್ದರು.