ಸೇಲಂ: ಮಾಜಿ ಶಾಸಕನೋರ್ವ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದಾರೆ.
ತಮಿಳುನಾಡಿನ ಸೇಲಂನಲ್ಲಿ ಟೋಲ್ ಗೇಟ್ ಬಳಿ ಕರ್ತವ್ಯದಲ್ಲಿದ್ದ ಪೋಲೀಸ್ ಅಧಿಕಾರಿ ವಿರುದ್ಧ ಕೂಗಾಡಿದ ಎಐಎಡಿಎಂಕೆ ಮಾಜಿ ಶಾಸಕ, ಡಿಎಂಕೆ ಮಾಜಿ ಸಂಸದನೂ ಆಗಿರುವ ಅರ್ಜುನನ್, ಅವರ ಮೇಲೆ ಹಲ್ಲೆಯನ್ನೂ ಮಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ.
ತಮಿಳುನಾಡಿನಲ್ಲಿ ಲಾಕ್ಡೌನ್ ಇರುವುದರಿಂದ ಹೊರಗೆ ಓಡಾಡುವವರಿಗೆ ಇ ಪಾಸ್ ಕಡ್ಡಾಯವಾಗಿದೆ. ಸೇಲಂ ಬಳಿ ಶಾಸಕ ಅರ್ಜುನನ್ ಕಾರನ್ನು ತಡೆದ ಪೊಲೀಸರು ಇ ಪಾಸ್ ತೋರಿಸುವಂತೆ ಕೇಳಿದ್ದಾರೆ. ಆದರೆ ಮಾಜಿ ಸಂಸದ ಸಂಯಮ ಕಳೆದುಕೊಂಡು ಪೊಲೀಸರ ವಿರುದ್ಧ ಕೂಗಾಡಲು ಆರಂಭಿಸಿದ್ದಾರೆ. ಬಳಿಕ ಕಾರಿನಿಂದ ಇಳಿದು ಬಂದು ಅಲ್ಲಿದ್ದ ಪೊಲೀಸ್ ಅಧಿಕಾರಿಯನ್ನು ತಳ್ಳಿದ್ದಲ್ಲದೆ, ಕ್ರೂರವಾಗಿ ಒದ್ದಿದ್ದಾರೆ. ಇದನ್ನೂ ಓದಿ: ತಿರುಪತಿ ಭಕ್ತರಿಗೆ ಗುಡ್ ನ್ಯೂಸ್: ಆನ್ಲೈನ್ ಟಿಕೆಟ್ ಸಂಖ್ಯೆ ಹೆಚ್ಚಿಸಿದ ಟಿಟಿಡಿ
ಪೊಲೀಸರು ಮತ್ತು ಅರ್ಜುನನ್ ನಡುವೆ ಕೆಲ ಹೊತ್ತು ಗಲಾಟೆ ನಡೆದಿದೆ. ಲಾಕ್ಡೌನ್ ಮಾರ್ಗಸೂಚಿಯಲ್ಲಿ ಹೇಳಲ್ಪಟ್ಟಂತಹ ಇ ಪಾಸ್ ಸೇರಿ ಯಾವುದೇ ದಾಖಲೆಯನ್ನೂ ಅರ್ಜುನನ್ ಹೊಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅರ್ಜುನನ್ ಐಪಿಸಿ ಮತ್ತು ಸಿಆರ್ಪಿಸಿಯ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಆದರೆ ಇದುವರೆಗೂ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)