ಅಮರಾವತಿ: ಆಡಳಿತರೂಢ ವೈಎಸ್ಆರ್ ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಟಿಡಿಪಿ ನಾಯಕ ನಾರಾ ಲೋಕೇಶ್, ಸಿಎಂ ಜಗನ್ ಮೋಹನ್ ರೆಡ್ಡಿ ಅವರನ್ನು ರಾವಣನಿಗೆ ಹೋಲಿಸಿ ಸೈಕೋ ಎಂದು ಕರೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ನಾರಾ ಲೋಕೇಶ್, ಜನರು ಪೇಪರ್ಗಳನ್ನು ಸುಡುವ ಮೂಲಕ ಆಡಳಿತರೂಢ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಬೇಕು ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ ಚುನಾವಣೆ| ಮತ್ತಷ್ಟು ಭುಗಿಲೆದ್ದ ಭಿನ್ನಾಭಿಪ್ರಾಯ; ಕಾಂಗ್ರೆಸ್ ವಿರುದ್ಧ ಪಿಡಿಎ ಅಸ್ತ್ರ ಉಪಯೋಗಿಸಿದ ಎಸ್ಪಿ
ದಸರಾ ಪ್ರಯುಕ್ತ ಇಡೀ ದೇಶವು ರಾವಣನನ್ನು ಸುಡುತ್ತಿದೆ. ಅದೇ ರೀತಿ ನಾವು ವಿಧ್ವಂಸಕ ಆಡಳಿತ ನಡೆಸುತ್ತಿರುವ ಮನೋರೋಗಿ ಜಗನ್ನಾಸುರನನ್ನು ಸುಟ್ಟು ರಾಜ್ಯದಲ್ಲಿ ಸೃಷ್ಟಿಯಾಗಿರುವ ಅರಾಜಕತೆಯನ್ನು ನಿಲ್ಲಿಸೋಣ. ವಿಜಯದಶಮಿಯಂದು ಪ್ರತಿಯೊಬ್ಬರು ಬೀದಿಗಿಳಿದು “ಸೈಕೋ ಪೋವಾಲಿ” ಎಂದು ಬರೆದಿರುವ ಪೇಪರ್ಗಳನ್ನು ಸುಟ್ಟು ಹಾಕಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ. ಚಂದ್ರಬಾಬು ನಾಯ್ಡು ಬಾಬು ಅವರು ಆದಷ್ಟು ಬೇಗ ಹೊರಬರಲಿ ಎಂದು ಈ ದಸರಾವನ್ನು ಆಚರಿಸೋಣ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಹಾಗೂ ಜನಸೇನಾ ಪಕ್ಷವು ಜಂಟಿಯಾಗಿ ಸ್ಪರ್ಧಿಸಲಿದ್ದು, 175 ವಿಧಾನಸಭಾ ಕ್ಷೇತ್ರಗಳ ಪೈಕಿ 160 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.