ಚಿಕ್ಕಮಗಳೂರು: ನವದೆಹಲಿಯಲ್ಲಿ ಮಂಗಳವಾರ ನಡೆದ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ದಮನಿಸಲು ಖಲಿಸ್ತಾನಿ – ಅರ್ಬನ್ ನಕ್ಸಲರು, ವಿಚಾರವಾದಿಗಳು ಹಾಗೂ ದೇಶ ವಿರೋಧಿಗಳು ರೈತರ ಹೆಸರಿನಲ್ಲಿ ನಡೆಸಿದ ಪಿತೂರಿಯಾಗಿದ್ದು ಈ ದುರ್ವರ್ತನೆ ಬಗ್ಗೆ ತನಿಖೆಯಾಗಬೇಕು ಎಂದು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಹೇಳಿದರು.
ನಿಜವಾದ ರೈತರು ಗಣರಾಜ್ಯೋತ್ಸವ ದಿನದಂದು ದೆಹಲಿ ಕೆಂಪುಕೋಟೆ ಮೇಲೇರಿ ದುರ್ವತನೆ ತೋರುವುದಿಲ್ಲ. ಪಂಜಾಬ್, ಹರಿಯಾಣ, ಉತ್ತರ ಭಾರತ ಸೇರಿದಂತೆ ಇಡೀ ದೇಶದ ಜನ ಸ್ವಾತಂತ್ರ್ಯ ಹೋರಾಟಕ್ಕಾಗಿ ಅದೇ ತ್ರಿವರ್ಣ ಧ್ವಜಕ್ಕಾಗಿ ಬಲಿದಾನಗೈದಿದ್ದಾರೆ. ಅವರು ಈ ರೀತಿ ವರ್ತನೆ ಮಾಡಲು ಸಾಧ್ಯವಿಲ್ಲ. ದೇಶವಿರೋಧಿ ಶಕ್ತಿಗಳ ಕೂಟ ಈ ಕೃತ್ಯ ಎಸಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಪಂಜಾಬ್ನ ಅಮರೀಂದರ್ ಸಿಂಗ್ ಇದ್ದ ಸಮಿತಿಯಲ್ಲೆ ಕೃಷಿ ಮಸೂದೆ ಬಗ್ಗೆ ಚರ್ಚೆಯಾಗಿದ್ದು ಅವರು ಇಂದು ಮುಖ್ಯಮಂತ್ರಿಯಾಗಿದ್ದಾರೆ. ಗಣರಾಜ್ಯೋತ್ಸವ ದಿನ ನಡೆದ ದುರ್ಘಟನೆಯನ್ನು ಅಲ್ಲಿನ ಸಿಎಂ ಅವರೆ ವಿರೋಧಿಸಿದ್ದಾರೆಂದರೆ ಅವರ ಕೈ ಮೀರಿ ಈ ಹೋರಾಟದ ಸಂಚು ರೂಪಿಸಲಾಗಿದೆ ಎಂಬುದು ಸ್ಪಷ್ಟ.
ಈ ಚಳವಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ನೆರವು ಲಭ್ಯವಾಗುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಅಪಮಾನ ಮಾಡಬೇಕೆಂದು ವ್ಯವಸ್ಥಿತ ಸಂಚು ರೂಪಿಸಿದ್ದು, ನಗರ ನಕ್ಸಲರು ಹಾಗೂ ವಿಚಾರ ವಾದಿಗಳು ಇದರ ನೇತೃತ್ವ ವಹಿಸಿದ್ದಾರೆ. ಜೆಎನ್ಯುುನಲ್ಲಿ ಘೊಷಣೆ ಕೂಗಿದವರನ್ನು ಬಿಡುಗಡೆ ಮಾಡಿ ಎಂದು ಕೇಳಿಕೊಂಡಿರುವುದೂ ಇದೇ ಕಾರಣಕ್ಕೆ. ಖಲಿಸ್ತಾನ್ ಮೂಮೆಂಟ್ಗೆ ಯಾರು ಬೆಂಬಲ ನೀಡಿದ್ದಾರೋ ಅವರೇ ರೈತರ ಹೆಸರಿನ ಚಳವಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಈ ಹಿಂದೆ ನಾನು ಹೇಳಿದ್ದೆ. ಆ ಮಾತು ಸತ್ಯ ಎನ್ನುವುದು ಸಾಬೀತಾಗುತ್ತಿದೆ ಎಂದರು.
ಎಪಿಎಂಸಿ, ಎಂಎಸ್ಪಿ ಇರುತ್ತದೆ, ರೈತರ ಅನುಕೂಲಕ್ಕಾಗಿ ತಂದಿರುವ ಮೂರು ಕೃಷಿ ಮಸೂದೆಯಲ್ಲಿ ಯಾವುದೇ ಲೋಪಗಳಿದ್ದರೂ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಬದ್ದವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಜ.29 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಎಲ್ಲಾ ರಾಜಕೀಯ ಪಕ್ಷಗಳಿಗೂ ಮಾತನಾಡಲು ಅವಕಾಶವಿದೆ. ಅಲ್ಲಿ ಚರ್ಚೆ ಮಾಡಬೇಕೇ ಹೊರತು ಈ ರೀತಿ ದುರ್ವರ್ತನೆ ಸರಿಯಲ್ಲ ಎಂದರು.