ನಂದಗುಡಿ: ಲಾಕ್ಡೌನ್ ಹಿನ್ನೆಲೆ ಸ್ವಯಂ ಬಂಧನಕ್ಕೆ ಒಳಗಾಗಿದ್ದ ರೈತಾಪಿ ವರ್ಗಕ್ಕೆ ಭಾನುವಾರ ಸಂಜೆ ಸುರಿದ ಮಳೆ ಮಂದಹಾಸ ಮೂಡಿಸಿದ್ದು, ಕೃಷಿ ಚಟುವಟಿಕೆ ಗರಿಗೆದರಿವೆ.
ಲಾಕ್ಡೌನ್ನಿಂದಾಗಿ ರೈತಾಪಿ ವರ್ಗಕ್ಕೆ ಕೆಲಸವಿಲ್ಲದೆ ಅಸಹಾಯಕ ಸ್ಥಿತಿ ನಿರ್ಮಾಣವಾಗಿತ್ತು. ಕೂಲಿಕಾರರ ಕೈಗೆ ಕೆಲಸವಿಲ್ಲದೆ ತಿನ್ನಲು ತುತ್ತು ಅನ್ನಕ್ಕೂ ಪರಿತಪಿಸುವಂತಾಗಿತ್ತು. ಈಗ ಮೇ ಮಾಸದ ಮಧ್ಯ ಭಾಗದಲ್ಲಿ ಮಳೆ ಸುರಿದ ಪರಿಣಾಮ ಕೃಷಿ ಚಟುವಟಿಕೆ ಚರುಕುಗೊಂಡಿದ್ದು, ಎಲ್ಲರಿಗೂ ಸಣ್ಣಪುಟ್ಟ ಕೆಲಸ ಸಿಗುವಂತಾಗಿದೆ.
ಬಿಸಿಲಿನ ಪ್ರತಾಪದಿಂದ ಹಸಿರು ಮೇವಿನ ಕೊರತೆ ಎದುರಿಸುತ್ತಿದ್ದ ಜಾನುವಾರುಗಳಿಗೆ ಭೂಮಿ ತಂಪಾಗಿ ಹೊಲಗದ್ದೆಗಳಲ್ಲಿ ಹುಲ್ಲು ಮೊಳಕೆಯೊಡೆಯುವ ಆಸೆ ಚಿಗುರಿದೆ.
ತಾಲೂಕಿನಲ್ಲಿ ಪ್ರಮುಖವಾಗಿ ರಾಗಿ, ಮುಸುಕಿನ ಜೋಳ, ಅಲಸಂದೆ, ತೊಗರಿ, ಅವರೆ ಪ್ರಮುಖ ಬೆಳೆಯಾಗಿದ್ದು, ಹುರುಳಿ, ನೆಲಗಡಲೆಯನ್ನು ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತಾರೆೆ. ತೊಗರಿ, ಅಲಸಂದೆ ಬಿತ್ತನೆಗೆ ಸಕಾಲವಾಗಿದ್ದು, ಈ ಭಾಗದಲ್ಲಿ ಜೂನ್ ತಿಂಗಳ ಮಧ್ಯ ಭಾಗದಲ್ಲಿ ಬಿತ್ತನೆ ಕಾರ್ಯ ಶುರುವಾಗುವ ನಿರೀಕ್ಷೆ ಇದೆ.
ಹೊಸಕೋಟೆ ತಾಲೂಕಿನಲ್ಲಿ ಮಳೆ ಉತ್ತಮವಾಗಿ ಸುರಿಯುತ್ತಿದ್ದು, ರೈತರು ಬಿತ್ತನೆ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ತೊಗರಿ, ಅಲಸಂದೆ ಬಿತ್ತನೆ ಮಾಡಲು ಸಕಾಲವಾಗಿದ್ದು, ಇಲಾಖೆಯಿಂದ ರೈತರಿಗೆ ಉಚಿತವಾಗಿ ತೊಗರಿ, ಅಲಸಂದೆ ಬಿತ್ತನೆ ಬೀಜ ವಿತರಿಸಲಾಗುತ್ತಿದೆ.
ಕೆ.ವಿ.ನಾಗರಾಜ್
ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ಹೊಸಕೋಟೆ