ಬೆಳಗಾವಿ: ಕೆನರಾ ಬ್ಯಾಂಕ್ ಬೆಳಗಾವಿಯ ಪ್ರಾಂತೀಯ ಕಚೇರಿ ಮುಂದಿನ ದಿನಗಳಲ್ಲಿ ಗ್ರಾಹಕರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಭವಿಷ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಬೇಕು ಎಂಬುದೇ ನನ್ನ ಆಶಯ ಎಂದು ಕೆನರಾ ಬ್ಯಾಂಕ್ ಪ್ರಾಂತೀಯ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಕೃಷ್ಣಾ ಕುಲಕರ್ಣಿ ಆಶಯ ವ್ಯಕ್ತಪಡಿಸಿದ್ದಾರೆ.
ನಗರದ ಕೊಲ್ಲಾಪುರ ವೃತ್ತದಲ್ಲಿರುವ ಕೆನರಾ ಬ್ಯಾಂಕ್ ಪ್ರಾಂತೀಯ ಕಚೇರಿಯಲ್ಲಿ ಇತ್ತೀಚೆಗೆ ಸಿಬ್ಬಂದಿ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಮ್ಮ ಅವಧಿಯಲ್ಲಿ ಈ ಕ್ಷೇತ್ರೀಯ ಕಚೇರಿಯ ವ್ಯಾಪ್ತಿಯ ಬ್ಯಾಂಕ್ಗಳ ಮೂಲಕ ಗ್ರಾಹಕರ ಸೇವೆ ಮಾಡುವುದರೊಂದಿಗೆ ಬ್ಯಾಂಕ್ ಉನ್ನತಿಗೆ ಶ್ರಮಿಸಿದ್ದೇನೆ. ಮೂರು ವರ್ಷಗಳ ಬಳಿಕ ಈಗ ಹುಬ್ಬಳ್ಳಿಗೆ ವರ್ಗಾವಣೆಗೊಂಡಿದ್ದರೂ, ತಮ್ಮ ಜತೆ ನಿರಂತರ ಸಂಪರ್ಕದಲ್ಲಿದ್ದು ಬ್ಯಾಂಕ್ ಅಥವಾ ಗ್ರಾಹಕರ ಸೇವೆಗೆ ಸ್ಪಂದಿಸುತ್ತೇನೆ ಎಂದು ಸಿಬ್ಬಂದಿಗೆ ಭರವಸೆ ನೀಡಿದರು.
ವಿಭಾಗೀಯ ಪ್ರಬಂಧಕ ಸಂಗಮೇಶ ಪಡ್ನಾಡ್ ಮಾತನಾಡಿ, ಮೂರು ವರ್ಷಗಳಲ್ಲಿ ಕೆನರಾ ಬ್ಯಾಂಕ್ ಸಹಾಯಕ ಮಹಾಪ್ರಬಂಧಕರಾದ ಕೃಷ್ಣಾ ಕುಲಕರ್ಣಿ ಅವರ ಸೇವೆ ಶ್ಲಾಘನೀಯ ಎಂದರು. ಕೆ.ಎನ್. ಕುಲಕರ್ಣಿ ಅವರನ್ನು ಸಿಬ್ಬಂದಿ ಆತ್ಮೀಯವಾಗಿ ಸನ್ಮಾನಿಸಿದರು.
ವಿಭಾಗೀಯ ಪ್ರಬಂಧಕರಾದ ಉದಯ ನಾಯಕ್, ಟಿಳಕವಾಡಿ ಶಾಖೆಯ ಮುಖ್ಯಪ್ರಬಂಧಕ ವೀರಪ್ಪ ಪತ್ರದ, ಸುನೀಲಕುಮಾರ, ಖಡೇಬಜಾರ್ ಶಾಖೆ ಮುಖ್ಯ ಪ್ರಬಂಧಕ ಮುಕುಂದ ಕುಲಕರ್ಣಿ, ಕ್ಷೇತ್ರೀಯ ಕಚೇರಿಯ ಹಿರಿಯ ಪ್ರಬಂಧಕ ಪ್ರಶಾಂತ ಕುಲಕರ್ಣಿ ಇತರರು ಇದ್ದರು.