ದಾವಣಗೆರೆ: ಪುತ್ರನ ಲಂಚ ಸ್ವೀಕಾರ ಪ್ರಕರಣ ಹಿನ್ನೆಲೆಯಲ್ಲಿ ನಾಪತ್ತೆಯಾಗಿದ್ದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ದೊರೆತ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ವಡ್ನಾಳ್ ಗ್ರಾಮದ ತಮ್ಮ ನಿವಾಸಕ್ಕೆ ಆಗಮಿಸಿದರು. ಈ ವಿಷಯ ತಿಳಿಯುತ್ತಿದ್ದಂತೆ ಸಂಭ್ರಮಿಸಿದ ಬೆಂಬಲಿಗರು ಅವರಿಗೆ ಮಾಲಾರ್ಪಣೆ ಮಾಡಿ, ಹೆಗಲ ಮೇಲೆ ಹೊತ್ತು ಅದ್ದೂರಿಯಾಗಿ ಸ್ವಾಗತ ಕೋರಿದರು. ಮೆರವಣಿಗೆಯ ಮೂಲಕ ಕರೆತಂದರು ಜೈಕಾರ ಕೂಗಿದರು.
ಇದಕ್ಕೂ ಮೊದಲು ಚನ್ನಗಿರಿ ಪಟ್ಟಣದಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಕಳೆದ 6 ದಿನಗಳಿಂದ ಶಾಸಕರು ಇಲ್ಲದ ಕಾರಣ ಅವರ ಮನೆಯ ಬಳಿ ಯಾರೂ ಇಲ್ಲದೇ ಬಿಕೋ ಎನ್ನುತ್ತಿತ್ತು. ಅವರು ವಾಪಸಾಗುತ್ತಿದ್ದಂತೆ ಬೆಂಬಲಿಗರು, ಕಾರ್ಯಕರ್ತರು ಶಾಸಕರ ನಿವಾಸದ ಬಳಿ ಜಮಾಯಿಸಿದರು.
ಇದನ್ನೂ ಓದಿ: ಎಷ್ಟೇ ಕೇಳಿಕೊಂಡರೂ ಗಂಡ ನನ್ನೊಂದಿಗೆ ಜೀವನ ನಡೆಸುತ್ತಿಲ್ಲ; ಮನನೊಂದು ಪ್ರಾಣ ಬಿಟ್ಟ ಪತ್ನಿ!
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ ಡಿಎಲ್) ಟೆಂಡರ್ಗೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಶಾಂತ್ ಮಾಡಾಳ್ ಮನೆಯಲ್ಲಿ 6 ಕೋಟಿ ನಗದನ್ನು ಲೋಕಾಯುಕ್ತ ಪೊಲೀಸರು ಗುರುವಾರ (ಮಾ. 02) ತಡರಾತ್ರಿ ವಶಪಡಿಸಿಕೊಂಡಿದ್ದಾರೆ. ಕೆಎಸ್ಡಿಎಲ್ ಅಧ್ಯಕ್ಷರೂ ಆಗಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಅವರನ್ನು 40 ಲಕ್ಷ ಲಂಚ ಪಡೆಯುತ್ತಿದ್ದಾಗ ಗುರುವಾರ ಸಂಜೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಅವರ ಖಾಸಗಿ ಕಚೇರಿಯಲ್ಲಿ ಇನ್ನೂ ಒಟ್ಟು 2.02 ಕೋಟಿ ನಗದು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: ದೇವನಹಳ್ಳಿ | ಹೆಂಡತಿಯ ಎರಡೂ ಕೈಗಳನ್ನು ಮಚ್ಚಿನಿಂದ ಕತ್ತರಿಸಿದ ಗಂಡ!
ಬಳಿಕ ಡಾಲರ್ಸ್ ಕಾಲೋನಿಯ ಪ್ರಶಾಂತ್ ಮನೆಯ ಮೇಲೆ ದಾಳಿಮಾಡಿದ್ದ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದರು. ಗುರುವಾರ ಸಂಜೆ ಖಾಸಗಿ ಕಚೇರಿಯಲ್ಲಿ 2.42 ಕೋಟಿ ಮತ್ತು ಮಧ್ಯರಾತ್ರಿ ಡಾಲಸ್೯ ಕಾಲನಿಯ ಪ್ರಶಾಂತ್ ನಿವಾಸದಲ್ಲಿ 6 ಕೋಟಿ ಸೇರಿ ಒಟ್ಟಾರೆ 8.42 ಕೋಟಿ ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಮರು ಸ್ಥಾಪನೆಯಾದ ಮೇಲೆ ಲೋಕಾ ಪೊಲೀಸರು ಭೇಟೆಯಾಡಿರುವ ದೊಡ್ಡ ಮೊತ್ತದ ಪ್ರಕರಣ ಇದಾಗಿದ್ದು, ಈ ಪ್ರಕರಣ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈ ಪ್ರಕರಣದ ಬಳಿಕ ವಿರೂಪಾಕ್ಷಪ್ಪ ಅವರು ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಪತ್ತೆಯಾಗಿದ್ದರು. ನಂತರ ಜಾಮೀನಿಗಾಗಿ ತಮ್ಮ ಪರ ವಕೀಲರಿಂದ ಅರ್ಜಿ ಸಲ್ಲಿಸಿದ್ದರು. ಇದೀಗ ಜಾಮೀನು ಮಂಜೂರಾಗಿದ್ದು, ಬಂಧನ ಭೀತಿಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.