ಮೂಡಿಗೆರೆ: ತಾಲೂಕಿನ ಗೋಣಿಬೀಡು ಸಮೀಪದ ಅಗ್ರಹಾರ ಗ್ರಾಮದ ಇತಿಹಾಸ ಪ್ರಸಿದ್ಧ ಆದಿ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವ ಗುರುವಾರ ನೆರವೇರಿತು.
ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಆದಿ ಸುಬ್ರಹ್ಮಣ್ಯ ಸ್ವಾಮಿ ಸಹಿತ ಪರಿವಾರ ದೇವತೆಗಳಿಗೆ ವಿವಿಧ ಅಭಿಷೇಕ ನೆರವೇರಿಸಿ, ಹೂವಿನ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಧ್ಯಾಹ್ನ ದೇವರ ಮೂರ್ತಿಯನ್ನು ರಥಾರೋಹಣ ಮಾಡಿಸಿ ಪೂಜೆ ಸಲ್ಲಿಸಲಾಯಿತು. ಗರುಡ ದರ್ಶನದ ಬಳಿಕ ತೇರನ್ನು ಎಳೆಯಲಾಯಿತು.
ರೈತರು ಕಾಫಿ, ಕಾಳುಮೆಣಸು, ಏಲಕ್ಕಿ, ಬಾಳೆ, ಅಡಕೆ, ತರಕಾರಿ ಸಹಿತ ಇತರೆ ಕೃಷಿ ಉತ್ಪನ್ನಗಳನ್ನು ರಥಕ್ಕೆ ಸಮರ್ಪಿಸಿ ಭಕ್ತಿ ಮೆರೆದರು. ಹೇಮಾವತಿ ನದಿ ದಡದಲ್ಲಿರುವ ಈ ಧಾರ್ಮಿಕ ಕ್ಷೇತ್ರವು ಚರ್ಮರೋಗ ನಿವಾರಣೆ, ಭಕ್ತರ ಇಷ್ಟಾರ್ಥ ನೆರವೇರಿಸುವ ತಾಣವೆಂದು ಪ್ರಸಿದ್ಧಿಯಾಗಿದೆ. ನವ ವಿವಾಹಿತರು, ಮಕ್ಕಳಾಗದ ದಂಪತಿ ಜಾತ್ರೆಗೆ ಬಂದು ಬೆಳ್ಳಿ ನಾಗರ ಮತ್ತಿತರ ವಸ್ತುಗಳನ್ನು ಹರಕೆ ರೂಪದಲ್ಲಿ ಸಲ್ಲಿಸಿದರು.