ಕೊಲ್ಕತ : ಪಶ್ಚಿಮ ಬಂಗಾಳದ ಮುನಿಸಿಪಾಲಿಟಿ ಕಛೇರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ರಾಜ್ಯದ ವಿಪಕ್ಷ ನಾಯಕರಾಗಿರುವ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಮತ್ತು ಅವರ ಸೋದರ ಕಳವು ಮಾಡಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಪೂರ್ವ ಮೆದಿನಿಪುರ್ ಜಿಲ್ಲೆಯ ಕಾಂತಿ ನಗರಪಾಲಿಕೆ ಆಡಳಿತ ಮಂಡಳಿಯ ಸದಸ್ಯರಾದ ರತ್ನದೀಪ್ ಮನ್ನ ಎಂಬುವರು ಈ ಬಗ್ಗೆ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
“ಮೇ 29, 2021 ರಂದು ಮಧ್ಯಾಹ್ನ 12.30 ಕ್ಕೆ ಸುವೇಂದು ಅಧಿಕಾರಿ ಮತ್ತು ಕಾಂತಿ ಮುನಿಸಿಪಾಲಿಟಿಯ ಮಾಜಿ ಅಧ್ಯಕ್ಷರಾಗಿದ್ದ ಅವರ ಸೋದರ ಸೌಮೇಂದು ಅಧಿಕಾರಿ ನಿರ್ದೇಶನದ ಮೇರೆಗೆ ಕಾಂತಿ ನಗರಪಾಲಿಕೆ ಕಛೇರಿಯ ಗೋಡೌನಿನಲ್ಲಿ ಇರಿಸಲಾಗಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ದಾಸ್ತಾನುಗಳನ್ನು ಬೀಗಗಳನ್ನು ಒಡೆದು ಬಲವಂತವಾಗಿ ಅಪಹರಿಸಲಾಯಿತು” ಎಂದು ಜೂನ್ 1 ರಂದು ರತ್ನದೀಪ್ ಮನ್ನ ಕಾಂತಿ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ಹೇಳಿದ್ದಾರೆ. ಸದರಿ ಕಳವಿಗೆ ಅಧಿಕಾರಿ ಸೋದರರು ತಮ್ಮ ಭದ್ರತೆಗೆ ನಿಯುಕ್ತಗೊಳಿಸಿರುವ ಕೇಂದ್ರೀಯ ಪಡೆಯ ಸಿಬ್ಬಂದಿಯನ್ನು ಬಳಸಿಕೊಂಡರು ಎಂದು ಆರೋಪಿಸಲಾಗಿದೆ.
ಚಂಡಮಾರುತ ಮತ್ತು ಪ್ರವಾಹಗಳನ್ನು ಅನುಭವಿಸಿರುವ ಪಶ್ಚಿಮ ಬಂಗಾಳಕ್ಕೆ ತಲುಪಿರುವ ಪರಿಹಾರ ಸಾಮಗ್ರಿಯನ್ನು ಆಡಳಿತಾರೂಢ ಟಿಎಂಸಿ ದುರ್ಬಳಕೆ ಮಾಡುತ್ತಿದೆ ಎಂದು ಬಿಜೆಪಿ ದೂರುತ್ತಾ ಬಂದಿದೆ. ಡಿಸೆಂಬರ್ 2020 ರಲ್ಲಿ ಟಿಎಂಸಿ ಬಿಟ್ಟು ಬಿಜೆಪಿ ಸೇರಿರುವ ಅಧಿಕಾರಿ ಸೋದರರ ಮೇಲೆ, ಇದೀಗ, ಅದೇ ರೀತಿಯ ಆರೋಪಗಳು ಕೇಳಿಬಂದಿವೆ. (ಏಜೆನ್ಸೀಸ್)
ಸಿಎಂ ಬದಲಾವಣೆ : ದೆಹಲಿಯಲ್ಲಾದ ಚರ್ಚೆ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು?