ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ಪೋಟೋ ಮತ್ತು ಹೆಸರು ಬಳಸಿಕೊಂಡು ನಕಲಿ ಫೇಸ್ ಬುಕ್ ಖಾತೆ ತೆರೆದು ಅವರ ಸ್ನೇಹಿತರಿಗೆ ಸಂದೇಶ ಕಳುಹಿಸಿ ವಂಚನೆ ಮಾಡಲು ಸೈಬರ್ ಕಳ್ಳರು ಯತ್ನಿಸಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಎಡಿಜಿಪಿ ಪಿ. ಹರಿಶೇಖರನ್ ಹೆಸರು, ಪೋಟೋ ದುರ್ಬಳಕ್ಕೆ ಮಾಡಿಕೊಂಡಿದ್ದಾರೆ. ಈ ಕುರಿತು ಎಡಿಜಿಪಿ ಕಚೇರಿ ಅಧಿಕಾರಿ ಬಿ.ಕೆ. ಉಷಾರಾಣಿ ಈ ಕುರಿತು ಕೇಂದ್ರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹರಿಶೇಖರನ್ ಪೋಟೋ, ಹೆಸರು ಬಳಸಿಕೊಂಡು ಫೇಸ್ ಬುಕ್ ನಲ್ಲಿ ಆರು ನಕಲಿ ಖಾತೆ ತೆರೆದಿದ್ದಾರೆ. ಆನಂತರ ಎಡಿಜಿಪಿ ಸ್ನೇಹಿತರಿಗೆ ಸಂದೇಶ ಕಳುಹಿಸಿ ತುರ್ತು ಹಣ ನೀಡುವಂತೆ ಮನವಿ ಮಾಡಿದ್ದರು. ಹಲವು ಸ್ನೇಹಿತರಿಂದ ಮಾಹಿತಿ ಪಡೆದ ಹರಿಶೇಖರನ್, ತಮ್ಮ ಆಪ್ತ ಸಹಾಯಕರಿಂದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಸೈಬರ್ ತಜ್ಞರ ಸಹಾಯ ಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.