More

    ರಾಗಕೆ ಸ್ವರವಾಗಿ..: ಧನಂಜಯ್, ರಚಿತಾ ಕಂಡಂತೆ ಮಾನ್ಸೂನ್..

    ‘ನೀವು ಇಲ್ಲ ಎನ್ನುವುದಕ್ಕೆ ಚಾನ್ಸೇ ಇಲ್ಲ …’

    ‘ಮಾನ್ಸೂನ್ ರಾಗ’ ಚಿತ್ರದ ಕಥೆ ಕೇಳುವುದಕ್ಕೆ ಮುಂಚೆಯೇ ಧನಂಜಯ್​ಗೆ ಇಂಥದ್ದೊಂದು ಮಾತು ಹೇಳಿದ್ದರಂತೆ ನಿರ್ಮಾಪಕ ವಿಖ್ಯಾತ್. ಅದಕ್ಕೆ ಕಾರಣವೂ ಇದೆ. ಅಷ್ಟರಲ್ಲಾಗಲೇ, ಕಥೆ ಕೇಳಿ ಚಿತ್ರದಲ್ಲಿ ನಟಿಸುವುದಕ್ಕೆ ರಚಿತಾ ರಾಮ್ ಒಪ್ಪಿದ್ದರಂತೆ. ಹಾಗಾಗಿ, ಧನಂಜಯ್ ಸಹ ಕಥೆ ಕೇಳಿ ‘ಮಾನ್ಸೂನ್ ರಾಗ’ದಲ್ಲಿ ನಟಿಸುವುದಕ್ಕೆ ಖಂಡಿತಾ ಒಪ್ಪುತ್ತಾರೆ ಎಂಬ ವಿಶ್ವಾಸ ನಿರ್ಮಾಪಕರದ್ದು. ಅದಕ್ಕೆ ಸರಿಯಾಗಿ ಧನಂಜಯ್ಗೂ ಕಥೆ ಇಷ್ಟವಾಗಿ, ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರಂತೆ. ಹಾಗೆ ಒಪ್ಪಿಕೊಂಡ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ‘ಮಾನ್ಸೂರ್ ರಾಗ‘ ಬಗ್ಗೆ ಮಾತಾಡುವ ಧನಂಜಯ್, ‘ಹಲವು ನೆನಪುಗಳನ್ನು ಕಟ್ಟಿಕೊಟ್ಟಿರುವ ಚಿತ್ರ ಇದು. ಆಗಷ್ಟೇ ಲಾಕ್​ಡೌನ್ ಮುಗಿದಿತ್ತು. ಈ ಸಂದರ್ಭದಲ್ಲಿ ಯಾವ ತರಹದ ಸಿನಿಮಾ ಮಾಡಬೇಕು ಎಂದು ಯೋಚಿಸುತ್ತಿದ್ದಾಗ, ವಿಖ್ಯಾತ್ ಈ ಕಥೆ ತೆಗೆದುಕೊಂಡು ಬಂದರು. ಕಥೆ ಬಹಳ ಚೆನ್ನಾಗಿತ್ತು. ಈ ತರಹದ ಪಾತ್ರ ಮಾಡಿರಲಿಲ್ಲ. ಖುಷಿಯಿಂದ ಒಪ್ಪಿಕೊಂಡು ಮಾಡಿದೆ’ ಎನ್ನುತ್ತಾರೆ ಧನಂಜಯ್.

    ಹಿಂದೊಮ್ಮೆ ಕತ್ತರಿಗುಪ್ಪೆಯ ರಚಿತಾ ಮನೆಯ ಮುಂದೆ ಓಡಾಡುತ್ತಿದ್ದ ಧನಂಜಯ್, ಆಕೆ ಎಲ್ಲಾದರೂ ಕಾಣುತ್ತಾರಾ, ಆಕೆಯ ಡಿಂಪಲ್ ಎಲ್ಲಾದರೂ ಕಾಣುತ್ತಾ ಎಂದು ಹುಡುಕುತ್ತಿದ್ದರಂತೆ. ಈಗ ಅದೇ ರಚಿತಾ ಜತೆಗೆ ನಟಿಸಿದ್ದು ಬಹಳ ಖುಷಿಯಾಯಿತು ಎನ್ನುತ್ತಾರೆ ಧನಂಜಯ್. ‘ರಚಿತಾ ಇದ್ದರೆ ಇಡೀ ಸೆಟ್​ನಲ್ಲಿ ಎನರ್ಜಿ ಇರುತ್ತದೆ. ಅವರೊಬ್ಬ ಭಾವಜೀವಿ. ಸುತ್ತ ಇರುವವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇನ್ನು, ಅಚ್ಯುತ್ ಕುಮಾರ್ ಮತ್ತು ಸುಹಾಸಿನಿ ಜತೆಗೆ ಈ ಚಿತ್ರದಲ್ಲಿ ನಾನು ನಟಿಸಲಾಗಲಿಲ್ಲ. ನಿಜ ಹೇಳಬೇಕೆಂದರೆ, ಅಚ್ಯುತ್ ಅವರೇ ಈ ಸಿನಿಮಾದ ನಿಜವಾದ ಹೀರೋ. ನಾವು ಅದರ ಭಾಗವಾಗಿದ್ದೇವೆ’ಎನ್ನುತ್ತಾರೆ.

    ಈ ಚಿತ್ರದಲ್ಲಿ ರಚಿತಾ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ನಟಿಸಿರುವುದು ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ‘ಎಂತಹ ಪಾತ್ರವಾದರೂ, ಅದನ್ನು ಚೆನ್ನಾಗಿ ಪ್ರೆಸೆಂಟ್ ಮಾಡುವುದಕ್ಕೆ ಒಳ್ಳೆಯ ನಿರ್ದೇಶಕ ಬೇಕು. ಆ ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ ಎಂಬ ನಂಬಿಕೆ ನಿರ್ದೇಶಕ ರವೀಂದ್ರನಾಥ್ ಅವರ ಮೇಲಿತ್ತು. ಹಾಗಾಗಿಯೇ, ಈ ಪಾತ್ರ ಒಪ್ಪಿಕೊಂಡೆ. ಧನಂಜಯ್ ಅವರಿಗೆ ನಟ ರಾಕ್ಷಸ ಅಂತ ಬಿರುದಿದೆ. ಅದಕ್ಕೆ ಸರಿಯಾಗಿ ಕ್ಯಾಮೆರಾ ಮುಂದೆ ರಾಕ್ಷಸನ ತರಹ ಕೆಲಸ ಮಾಡುತ್ತಾರೆ. ಕ್ಯಾಮೆರಾ ಹಿಂದೆ ಅವರಷ್ಟು ಒಳ್ಳೆಯ ಮನುಷ್ಯನೇ ಇಲ್ಲ. ಅವರು ಹೆಚ್ಚು ಮಾತನಾಡುವುದಿಲ್ಲ. ಅವರ ಮೌನ ಮಾತಾಡುತ್ತದೆ. ನಮ್ಮಿಬ್ಬರಿಗೂ ಈ ಚಿತ್ರದಲ್ಲಿ ಒಳ್ಳೆಯ ಪಾತ್ರವಿದೆ’ ಎಂದು ಮೆಚ್ಚಿ ಮಾತಾಡುತ್ತಾರೆ ರಚಿತಾ.

    ‘ಮಾನ್ಸೂನ್ ರಾಗ’ ಚಿತ್ರದಲ್ಲಿ ಧನಂಜಯ್, ರಚಿತಾ, ಸುಹಾಸಿನಿ ಮತ್ತು ಅಚ್ಯುತ್ ಜತೆಗೆ ಯಶಾ ಶಿವಕುಮಾರ್, ಬ್ರೋ ಗೌಡ, ರಘು ಮುಂತಾದವರು ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಎಸ್.ಕೆ. ರಾವ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ಪುನೀತ್ ರಾಜಕುಮಾರ್​ ಜನ್ಮದಿನ ಇನ್ಮುಂದೆ ಸ್ಫೂರ್ತಿ ದಿನ: ಸರ್ಕಾರದ ವತಿಯಿಂದಲೇ ಆಚರಣೆ ಎಂದು ಸಿಎಂ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts