ಬೆಂಗಳೂರು: ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್. ಕುಮಾರ್ ನಡುವೆ ಕಾಲ್ಶೀಟ್ ವಿಚಾರವಾಗಿ ಹಲವು ವಾರಗಳಿಂದ ನಡೆಯುತ್ತಿರುವ ಜಟಾಪಟಿಗೆ ತಾರ್ಕಿಕ ಅಂತ್ಯ ನೀಡಲು ಚಿತ್ರರಂಗದ ಹಿರಿಯರಾದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಹ್ಯಾಟ್ರಿಕ್ ಶಿವರಾಜ್ಕುಮಾರ್ ನೇತೃತ್ವದಲ್ಲಿ ನಿನ್ನೆ ತಡರಾತ್ರಿಯವರೆಗೂ ಸಂಧಾನ ಸಭೆ ನಡೆದಿದೆ. ಈ ಸಂಧಾನ ಸಭೆಯಲ್ಲಿ ಯಾರು ಯಾರು ಇದ್ದರು? ಏನು ತೀರ್ಮಾನ ಆಗಿದೆ? ಸಂಧಾನ ಸಭೆ ಯಶಸ್ವಿ ಆಯಿತಾ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ನಿನ್ನೆ ಮಧ್ಯಾಹ್ನ ರವಿಚಂದ್ರನ್ ಅವರ ಹೊಸಕೆರೆಹಳ್ಳಿ ನಿವಾಸದಲ್ಲಿ ಆರಂಭವಾದ ಸಂಧಾನ ಸಭೆ ತಡರಾತ್ರಿಯವರೆಗೂ ನಡೆದಿದೆ. ರವಿಚಂದ್ರನ್ ಮತ್ತು ಶಿವಣ್ಣ ಮಾತಿಗೆ ಗೌರವ ನೀಡಿ ನಟ ಕಿಚ್ಚ ಸುದೀಪ್ ಕೂಡ ಸಂಧಾನ ಸಭೆಯಲ್ಲಿ ಪಾಲ್ಗೊಂಡಿದ್ದರು. ಉಳಿದಂತೆ ಎಂ.ಎನ್. ಕುಮಾರ್, ಎಂ. ಎನ್. ಸುರೇಶ್, ರಾಕ್ಲೈನ್ ವೆಂಕಟೇಶ್, ಚಲನಚಿತ್ರಣ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್ ಸೇರಿದಂತೆ ಚಿತ್ರರಂಗದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಇನ್ನೂ ಬಗೆಹರಿದಿಲ್ಲ
ಈ ವಿವಾದವನ್ನು ಕೊರ್ಟಿನ ಹೊರಗೆ ಇತ್ಯರ್ಥ ಮಾಡಿಸಲು ಎಂ.ಎನ್.ಕುಮಾರ್ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಂಧಾನ ಸಭೆ ನಡೆಯುತ್ತಿದ್ದು, ಇಬ್ಬರ ನಡುವಿನ ಜಟಾಪಟಿ ಇನ್ನು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿಲ್ಲ ಎಂದು ತಿಳಿದುಬಂದಿದೆ. ನಿನ್ನೆ ತಡರಾತ್ರಿ 3 ರಿಂದ 4 ಗಂಟೆವರೆಗೂ ಚರ್ಚೆ ನಡೆದಿದೆ. ಸದ್ಯ ಇಬ್ಬರ ವಾದ-ವಿವಾದ ಮುಂದುವರೆದಿದ್ದು, ಸಮಸ್ಯೆ ಇನ್ನು ಬಗೆ ಹರೆದಿಲ್ಲ ಎಂದು ಮೂಲಗಳು ತಿಳಿಸಿವೆ.
ಚರ್ಚೆ ಮುಂದುವರಿಯಲಿದೆ
ಇಬ್ಬರ ಹೇಳಿಕೆಯನ್ನು ಪರಿಶೀಲಿಸುತ್ತಿರುವ ರವಿಚಂದ್ರನ್ ಹಾಗೂ ಶಿವಣ್ಣ ಸೇರಿದಂತೆ ಇತರರು ಗೊಂದಲದಲ್ಲಿದ್ದಾರಂತೆ. ಸದ್ಯಕ್ಕೆ ನಿನ್ನೆಯ ಸಂಧಾನ ಸಭೆ ಮುಕ್ತಾಯಗೊಂಡಿದ್ದು, ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಮತ್ತೊಮ್ಮೆ ಈ ಚರ್ಚೆ ಮುಂದುವರೆಯಲಿದೆ ಎಂದು ಬಲ್ಲ ಮೂಲಗಳು ಹೇಳಿವೆ. ಶಿವಣ್ಣ ಹಾಗೂ ರವಿಚಂದ್ರನ್ ನಾಯಕತ್ವದ್ಲಲೇ ಈ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಎಂ.ಎನ್. ಕುಮಾರ್ ಆರೋಪವೇನು?
ಕಿಚ್ಚನ ಜತೆ ಮಾಣಿಕ್ಯ, ಮುಕುಂದ ಮುರಾರಿ ಸಿನಿಮಾ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ಮಾಪಕ ಎಂ.ಎನ್. ಕುಮಾರ್ ಎರಡು ವಾರದ ಹಿಂದೆ ಇದ್ದಕ್ಕಿದ್ದಂತೆ ಸುದ್ದಿಗೋಷ್ಠಿ ನಡೆಸಿ ಸುದೀಪ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಸಿನಿಮಾಗೆ ಅಡ್ವಾನ್ಸ್ ಪಡೆದು ಸಿನಿಮಾ ಮಾಡಿಕೊಡದೇ ಸತಾಯಿಸುತ್ತಿದ್ದಾರೆ. ಎಷ್ಟೇ ಬಾರಿ ಮನೆಗೆ ಹೋದರು ನಮಗೆ ಸ್ಪಂದಿಸುತ್ತಿಲ್ಲ. ಅವರಿಂದ ಸಾಕಷ್ಟು ಹಣ ನಷ್ಟವಾಗಿದೆ. ಮನೆಯ ಅಡುಗೆ ಕೋಣೆ ರಿಪೇರಿಗೆಂದು 10 ಕೋಟಿ ರೂ. ಹಣ ನೀಡಿದ್ದೇನೆ. ಅದ್ಯಾವುದನ್ನು ನೀಡದೆ, ಸಿನಿಮಾ ಮಾಡಿಕೊಡದೆ ಸುದೀಪ್ ಸತಾಯಿಸುತ್ತಿದ್ದಾರೆ ಎಂದು ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕುಮಾರ್ ಆರೋಪಗಳ ಸುರಿಮಳೆಗೈದರು.
ಮಾನನಷ್ಟ ಮೊಕದ್ದಮ್ಮೆ
ಈ ಆರೋಪಗಳ ಬೆನ್ನಲ್ಲೇ ಸುದೀಪ್ ಟ್ವೀಟ್ ಮೂಲಕ ನಯವಾಗಿಯೇ ಎಚ್ಚರಿಕೆ ನೀಡಿದ್ದರು. ಅಲ್ಲದೆ, ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರ ಬರೆದು, ದಾಖಲೆಗಳಿಲ್ಲದೆ ಆರೋಪ ಮಾಡುವುದು ಸರಿಯಲ್ಲ, ಈ ಪ್ರಕರಣ ಕೋರ್ಟ್ನಲ್ಲೇ ಇತ್ಯರ್ಥವಾಗಲಿ ಎಂದು ಹೇಳಿ ನಿರ್ಮಾಪಕ ಎಂ.ಎನ್. ಕುಮಾರ್ ವಿರುದ್ಧ ನ್ಯಾಯಾಲಯದಲ್ಲಿ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮ್ಮೆಯನ್ನು ಸುದೀಪ್ ಹೂಡಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ತಯಾರಿಗೆ ಕೈಹಾಕಿದ ಕಾಂಗ್ರೆಸ್: 28 ಕ್ಷೇತ್ರಗಳ ಚಿತ್ರಣ ಪಡೆಯಲು ಜವಾಬ್ದಾರಿ ಹಂಚಿಕೆ
ವಾಣಿಜ್ಯ ಮಂಡಳಿಯಲ್ಲೇ ಇತ್ಯರ್ಥಕ್ಕೆ ಪಟ್ಟು
ಯಾವಾಗ ಸುದೀಪ್ ಕೋರ್ಟ್ ಮೆಟ್ಟಿಲೇರಿದರೂ ತನ್ನ ವರಸೆ ಬದಲಿಸಿದ ನಿರ್ಮಾಪಕ ಎಂ.ಎನ್. ಕುಮಾರ್, ಸಂಧಾನದ ಮೂಲಕವೇ ಸಮಸ್ಯೆ ಬಗೆಹರಿಸುವಂತೆ ಪಟ್ಟು ಹಿಡಿದರು. ಅಲ್ಲದೆ, ವಾಣಿಜ್ಯ ಮಂಡಳಿಯಲ್ಲೇ ಧರಣಿ ಕುಳಿತರು. ಕೆಲ ನಿರ್ಮಾಪಕರು ಕೂಡ ಅವರಿಗೆ ಸಾಥ್ ನೀಡಿದರು. ಕೊನೆಗೆ ಈ ಪ್ರಕರಣಕ್ಕೆ ರವಿಚಂದ್ರನ್ ಮತ್ತು ಶಿವಣ್ಣ ಎಂಟ್ರಿಯಾಗಿದ್ದು, ಇದೀಗ ಸಂಧಾನ ಸಭೆಯ ಹಂತಕ್ಕೆ ಬಂದಿದೆ. ಈ ಪ್ರಕರಣ ಯಾವ ತೀರ್ಮಾನದೊಂದಿಗೆ ತಾರ್ಕಿಕ ಅಂತ್ಯ ಕಾಣುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಕಿಚ್ಚ 46 ಬಳಿಕ ಶುರು
ಅಂದಹಾಗೆ ಇಷ್ಟು ದಿನ ಸುಮ್ಮನಿದ್ದ ಕುಮಾರ್ ಅವರು ದಿಢೀರನೇ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದೇಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ನಿಮಗೆ ಗೊತ್ತಿರಹುದು. ಜುಲೈ 2ರಂದು ಕಿಚ್ಚನ 46ನೇ ಸಿನಿಮಾದ ಟೀಸರ್ ಬಿಡುಗಡೆಯಾಯಿತು. ಈ ಟೀಸರ್ ಎಲ್ಲೆಡೆ ಭಾರೀ ಸದ್ದು ಮಾಡಿತು. ಆದರೆ, ಈ ಸಿನಿಮಾ ನಿರ್ಮಿಸುತ್ತಿರುವುದು ಕನ್ನಡದ ನಿರ್ಮಾಪಕರಲ್ಲ. ಬದಲಿಗೆ ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ತನು. ತಮಿಳು ನಿರ್ಮಾಪಕರಿಗೆ ಸುದೀಪ್ ಡೇಟ್ ಕೊಟ್ಟಿರುವುದರಿಂದ ಕನ್ನಡದ ಕೆಲ ನಿರ್ಮಾಪಕರಲ್ಲಿ ಅಸಮಾಧಾನ ಭುಗಿಲೆದ್ದಿರಬಹುದು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುದೀಪ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದಾರೆ ಎಂಬ ವಾದವಿದೆ. ಈ ಪ್ರಕರಣ ಎಲ್ಲಿ ಹೋಗಿ ನಿಲ್ಲುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. (ದಿಗ್ವಿಜಯ ನ್ಯೂಸ್)
ಕಾನೂನು ಹೋರಾಟಕ್ಕೆ ಸುದೀಪ್ ಸಜ್ಜು: ಸಂಧಾನಕ್ಕೆ ಒಪ್ಪದ ಕಿಚ್ಚ ಕೋರ್ಟ್ ಮೆಟ್ಟಿಲೇರಲು ಇದೇ ಕಾರಣ!
ಇಬ್ಬರು ಹೆಣ್ಣುಮಕ್ಕಳ ಜತೆ ಬಾವಿಗೆ ಹಾರಿದ ತಾಯಿ: ಓರ್ವ ಬಾಲಕಿ ಪಾರು, ಚಿಕ್ಕಬಳ್ಳಾಪುರದಲ್ಲಿ ಕರುಣಾಜನಕ ಘಟನೆ