ಬೆಂಗಳೂರು: ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ ಸಂಬಂಧ ನಟ ಚೇತನ್ಗೆ ಬಸವನಗುಡಿ ಪೊಲೀಸರು ನೋಟಿಸ್ ಹೊರಡಿಸಿದ್ದಾರೆ.
ಚೇತನ್ ವಿರುದ್ಧ ವಿಪ್ರ ಯುವ ವೇದಿಕೆಯ ಪವನ್ ಕುಮಾರ್ ಶರ್ಮಾ ಅವರು ಬಸವನಗುಡಿ ಠಾಣೆಗೆ ದೂರು ನೀಡಿದ್ದರು. ಪ್ರಕರಣವೂ ದಾಖಲಾಗಿತ್ತು. ಇದೀಗ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ.
ಚಿತ್ರನಟ ಚೇತನ್ ಸನಾತನ ಹಿಂದೂ ಧರ್ಮದ ಬುನಾದಿಗೆ ಪೆಟ್ಟು ಬೀಳುವಂತೆ, ಹಿಂದೂ ಧರ್ಮವನ್ನು ಹೊಡೆದೆಬ್ಬಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಉದ್ದೇಶದಿಂದ ಹಾಗೂ ಹಿಂದೂ ಧರ್ಮದಲ್ಲಿನ ನಾನಾ ಪ್ರವರ್ಗಗಳಲ್ಲಿ ಇರುವವರನ್ನು ಛೇಡಿಸಿದ್ದಾರೆ. ಧರ್ಮಾಂದತೆಯನ್ನು ಹುಟ್ಟು ಹಾಕಿ ಆಯಾ ಪ್ರವರ್ಗಗಳಲ್ಲಿ ಮನಸ್ತಾಪ, ಕಲಹ, ಘರ್ಷಣೆಗಳನ್ನು ಉಂಟು ಮಾಡಿ ಧರ್ಮ ಸಂಘರ್ಷಕ್ಕೆ ಕಾರಣರಾಗುವ ರೀತಿಯಲ್ಲಿ ಬ್ರಾಹ್ಮಣ್ಯದ ಅವಹೇಳನಕಾರಿ ನಿಂದನೆ ಮಾಡಿರುವುದನ್ನು ನೋಡಿರುತ್ತೇವೆ. ಚೇತನ್ ಪುರೋಹಿತಶಾಹಿ ಬಗ್ಗೆ ನಿಂದನೆ ಮಾಡಿರುವುದು ಹಿಂದೂ ಧರ್ಮದಲ್ಲಿ ಸೌಹಾರ್ಧತೆಯಿಂದ ಬಾಳ್ವೆ ಮಾಡುತ್ತಿರುವವರ ಮಧ್ಯೆ, ಮತ, ಧರ್ಮಗಳ ಮಧ್ಯೆ ವಿಷ ಭೀಜ ಬಿತ್ತುವ ಹುನ್ನಾರದೊಂದಿಗೆ ದುರುದ್ಧೇಶದಿಂದ ಹೀನಾಮಾನವಾಗಿ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಪವನ್ ಕುಮಾರ್ ಶರ್ಮಾ ಉಲ್ಲೇಖಿಸಿದ್ದಾರೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಚ್.ಎಸ್.ಸಚ್ಚಿದಾನಂದ ಮೂರ್ತಿಯು ಸಹ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೂ ಈ ಕುರಿತು ದೂರು ನೀಡಿದ್ದರು.
ಏನಿದು ಪ್ರಕರಣ ?
ಬ್ರಾಹ್ಮಣ್ಯವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮನೋಭಾವವನ್ನು ನಿರಾಕರಿಸುತ್ತದೆ ನಾವು ಬ್ರಾಹ್ಮಣ್ಯವನ್ನು ಬೇರುಸಹಿತ ಕಿತ್ತುಹಾಕಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಎಲ್ಲರೂ ಸರಿಸಮಾನರಾಗಿ ಜನಿಸಿದರೆ, ಬ್ರಾಹ್ಮಣರು ಮಾತ್ರ ಅತ್ಯುನ್ನತರು ಮತ್ತು ಉಳಿದವರೆಲ್ಲರೂ ಕೆಳಹಂತದವರು ಮತ್ತು ಅಸ್ಪೃಶ್ಯರು ಎಂದು ಹೇಳುವುದು ಸಂಪೂರ್ಣ ಅಸಂಬದ್ಧ ಎಂಬುದಾಗಿ ಪೆರಿಯಾರ್ ಹೇಳಿದ್ದಾರೆ ಎಂದು ಚೇತನ್ ಟ್ವೀಟ್ ಮಾಡಿದ್ದರು. ಈ ಹೇಳಿಕೆ ಬ್ರಾಹ್ಮಣ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿತ್ತು.
ಲವ್ ಫೇಲ್ಯೂರ್ ಆಗಿದ್ದಕ್ಕೆ ಠಾಣೆಗೆ ಫೋನ್ ಮಾಡಿ ಮಹಿಳಾ ಪಿಎಸ್ಐ ಹೀಗ್ ಮಾಡೋದಾ?
ನಟಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಪ್ರತಿಷ್ಠಿತ ಉದ್ಯಮಿ ಸೇರಿದಂತೆ ಐವರ ಬಂಧನ!