ಮಂಗಳೂರು: ಮಂಗಳೂರು ಮತ್ತು ಪುತ್ತೂರು ಕೆಎಸ್ಆರ್ಟಿಸಿ ವಿಭಾಗದಲ್ಲಿ ಅಂತಿಮ ನೋಟಿಸ್ ನೀಡಿದ್ದರೂ ಸೋಮವಾರ ಬಹುತೇಕ ನೌಕರರು ಕೆಲಸಕ್ಕೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಕ್ಕಾಲಂಶ ತರಬೇತಿ ನೌಕರರ ವಿರುದ್ಧ ನಿಗಮ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಈ ಎರಡೂ ವಿಭಾಗಗಳಲ್ಲಿ ತಲಾ 250ರಷ್ಟು ತರಬೇತಿ ನೌಕರರಿದ್ದಾರೆ. ಈಗ ತರಬೇತಿ ಅವಧಿಯಲ್ಲಿ ಇರುವ ಕಾರಣ ನಿಯಮಾನುಸಾರ ಮುಷ್ಕರಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಆದರೆ ಈ ನೌಕರರು ಆರಂಭದಿಂದಲೂ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಈ ಕಾರಣಕ್ಕೆ ನಿಗಮದ ಅಧಿಕಾರಿಗಳು ಶುಕ್ರವಾರ ಅಂತಿಮ ನೋಟಿಸ್ ನೀಡಿ, ಸೋಮವಾರ ಬೆಳಗ್ಗೆ ಕೆಲಸಕ್ಕೆ ಕಡ್ಡಾಯ ಹಾಜರಾಗುವಂತೆ, ಇಲ್ಲವೇ ಶಿಸ್ತಿನ ಕ್ರಮ ಎದುರಿಸುವಂತೆ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆ ಹಿನ್ನೆಲೆಯಲ್ಲಿ ಬೆರಳೆಣಿಕೆ ಮಂದಿ ತರಬೇತಿ ನೌಕರರು ಮಾತ್ರ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಷ್ಕರ ಕೈಬಿಟ್ಟು ಕಾಯಂ ನೌಕರರು ಹಂತ ಹಂತವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಸೋಮವಾರ ವೇಳೆ ಮಂಗಳೂರಿನಲ್ಲಿ 219 ಹಾಗೂ ಪುತ್ತೂರಿನಲ್ಲಿ 266 ಬಸ್ಗಳು ಸಂಚಾರಕ್ಕೆ ಇಳಿದಂತಾಗಿದೆ. ಮಂಗಳೂರಿನಲ್ಲಿ ಒಂದೆರಡು ನರ್ಮ್ ಬಸ್ ಕೂಡ ಸಂಚಾರ ನಡೆಸಿದೆ. ಸೋಮವಾರ ಒಂದೇ ದಿನ ಮಂಗಳೂರಲ್ಲಿ 171 ಹಾಗೂ ಪುತ್ತೂರಲ್ಲಿ 147 ಬಸ್ಗಳು ಸಂಚಾರಕ್ಕೆ ಇಳಿದಿವೆ. ಪುತ್ತೂರಿನಿಂದ ಸೋಮವಾರ ರಾತ್ರಿ ಬೆಂಗಳೂರಿಗೆ ನಾಲ್ಕೈದು ಬಸ್ಗಳು ಸಂಚರಿಸಿದ್ದು, ಭಾನುವಾರ ಕೂಡ ವಾರಾಂತ್ಯದ ಸಂಚಾರ ನಡೆಸಿವೆ. ಹಗಲು ಹೊತ್ತು ಧರ್ಮಸ್ಥಳ, ಪುತ್ತೂರು, ಬಿ.ಸಿ.ರೋಡ್, ಸುಳ್ಯಗಳಿಂದ ಬೆಂಗಳೂರಿಗೆ ಸುಮಾರು 24 ಬಸ್ಗಳು ಸಂಚಾರ ನಡೆಸಿವೆ.