ನಾಗರಮುನ್ನೋಳಿ: ದಿನಸಿ ತರಲೆಂದು ಮನೆಯಿಂದ ಹೊರಟಿದ್ದ ವೃದ್ಧನೊಬ್ಬನಿಗೆ ರಸ್ತೆ ಮೇಲೆ ಬರುತ್ತಿದ್ದ ಕಾರೇ ಯಮ ರೂಪ ತೋರಿರುವ ಘಟನೆ ಬೆಳಗಾವಿಯ ನಾಗರಮುನ್ನೋಳಿಯಲ್ಲಿ ನಡೆದಿದೆ. ಗ್ರಾಮದ ಹೊರವಲಯದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಕಾರು ಡಿಕ್ಕಿ ಹೊಡೆದು ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಲ್ಲಪ್ಪ ಭೀಮಪ್ಪ ಮದ್ಯಾಳಿ (60) ಮೃತರು. ತೋಟದ ಮನೆಯಿಂದ ನಾಗರಮುನ್ನೋಳಿ ಗ್ರಾಮಕ್ಕೆ ದಿನಸಿ ಖರೀದಿಗೆ ಹೊರಟಿದ್ದ ವೃದ್ಧನಿಗೆ ಎದುರುಗಡೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ವೃದ್ಧ ರಸ್ತೆ ಪಕ್ಕದ ಕಾಲುವೆಗೆ ಬಿದ್ದಿದ್ದಾರೆ.
ಚಾಲಕ ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಪಿಎಸ್ಐ ರಾಕೇಶ ಬಗಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.