More

    ಅಪಘಾತಗೊಂಡ ಸವಾರನ ಉಪಚರಿಸುತ್ತಿದ್ದ ಯುವಕ ಲಾರಿ ಅಡಿಗೆ ಸಿಲುಕಿ ಮೃತ್ಯು

    ಮಂಗಳೂರು: ಬೈಕಂಪಾಡಿ ಸಮೀಪ ಶನಿವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸವಾರನನ್ನು ಉಪಚರಿಸಲು ಮುಂದಾಗಿದ್ದ ಸ್ಕೂಟರ್ ಸವಾರ ಲಾರಿ ಅಡಿಗೆ ಸಿಲುಕಿ ಮೃತಪಟ್ಟಿದ್ದಾರೆ.

    ಬೈಕ್ ಸವಾರ ಸುಳ್ಯ ದೊಡ್ಡತೋಟ ಬಳಿಯ ಮೇರ್ಕಜೆಯ ಯುವಕ ತೇಜಸ್(28) ಮೃತಪಟ್ಟವರು. ಇವರು ಮಂಗಳೂರಿನಲ್ಲಿ ಇಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದರು. ಸಂಜೆ ವೇಳೆ ಕರ್ತವ್ಯ ಮುಗಿಸಿ ಮನೆ ಕಡೆ ತೆರಳುತ್ತಿದ್ದರು. ಈ ವೇಳೆ ಬೈಕಂಪಾಡಿ ರಸ್ತೆಯಲ್ಲಿ ದ್ವಿಚಕ್ರ ವಾಹನವೊಂದು ಅಪಘಾತಕ್ಕೀಡಾಗಿತ್ತು. ಇದನ್ನು ಗಮನಿಸಿದ ತೇಜಸ್ ತನ್ನ ಸ್ಕೂಟರ್‌ನಿಂದ ಇಳಿದು ಗಾಯಾಳು ಬೈಕ್ ಸವಾರನನ್ನು ಉಪಚರಿಸಲು ಮುಂದಾಗಿದ್ದರು.

    ರಸ್ತೆಯಲ್ಲಿ ಅಡ್ಡಬಿದ್ದಿದ್ದ ದ್ವಿಚಕ್ರ ವಾಹನವನ್ನು ಎತ್ತಿ ನಿಲ್ಲಿಸಿದ್ದಾರೆ. ನಂತರ ಅದೇ ಬೈಕ್‌ನಲ್ಲಿ ಕುಳಿತು ದೂಡಿಕೊಂಡು ರಸ್ತೆಯ ಬದಿಗೆ ತರುವ ಪ್ರಯತ್ನದಲ್ಲಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಆಗಮಿಸಿದ ಲಾರಿಯೊಂದು ತೇಜಸ್ ದೂಡಿಕೊಂಡು ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಅನತಿ ದೂರದವರೆಗೆ ಎಳೆದೊಯ್ದಿದೆ. ಇದರಿಂದ ಅವರ ಸೊಂಟದ ಕೆಳ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಸ್ಥಳೀಯರು ಆಗಮಿಸಿ ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಗಾಯಾಳು ವಿಪರೀತ ರಕ್ತಸ್ರಾವದಿಂದ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ತೇಜಸ್ ಅವರು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ. ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts