ಬೆಂಗಳೂರು:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿರುವ ನಾನಾ ಅಕಾಡೆಮಿಗಳಿಗೆ ನೇಮಕ ಪ್ರಕ್ರಿಯೆ ತಾಲೀಮು ಬಿರುಸು ಪಡೆದುಕೊಂಡಿದೆ. ಡಿಸೆಂಬರ್ ಮೊದಲ ವಾರದಲ್ಲಿ ಅಕಾಡೆಮಿ ನೇಮಕ ಪ್ರಕ್ರಿಯೆ ಆಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.
ಅಕಾಡೆಮಿ ಅಧ್ಯಕ್ಷರಾಗಬೇಕು ಎನ್ನುವ ಕನಸು ಇಟ್ಟುಕೊಂಡಿರುವ ಹಲವರು ಈಗಾಗಲೇ ತಮ್ಮ ಪ್ರಭಾವವನ್ನು ತೋರಿಸಲು ಕಸರತ್ತು ನಡೆಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಮತ್ತು ಮುಖ್ಯಮಂತ್ರಿಗಳ ಮೇಲೆ ಶಿಾರಸ್ಸುಗಳ ಮೂಲಕ ಪ್ರಭಾವ ಬೀರಲು ಭರ್ಜರಿ ಪೈಪೋಟಿಯೇ ನಡೆದಿದೆ. ಶಾಸಕರು ಮತ್ತು ಸಚಿವರು ಅಷ್ಟೆ ಅಲ್ಲ, ಕೆಲ ಗಣ್ಯರು ಮತ್ತು ಸ್ವಾಮೀಜಿಗಳ ಶಿಾರಸ್ಸು ಪತ್ರಗಳು ಕನ್ನಡ ಸಂಸ್ಕೃತಿ ಇಲಾಖೆ ಸಚಿವರ ಕಚೇರಿ ತಲುಪಿವೆ.
ಯಾವ್ಯಾವ ಅಕಾಡೆಮಿಗೆ ಯಾರ್ಯಾರು ಅರ್ಹರು ಎನ್ನುವುದನ್ನು 1:2 ಆಧಾರದ ಮೇಲೆ ಪಟ್ಟಿ ಮಾಡಿಕೊಡಲು ಔಪಚಾರಿಕವಾಗಿ ಆಯ್ದ ತಜ್ಞರ ಸಮಿತಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಸರ್ಕಾರದ ಪ್ರಕಾರ ಇದು ಅಧಿಕೃತ ಸಮಿತಿಯಲ್ಲ. ಸಲಹೆ ರೂಪದಲ್ಲಿ ನಾಮ ನಿರ್ದೇಶನಗಳನ್ನು ಪಡೆದುಕೊಳ್ಳಲು ಮಾಡಿಕೊಂಡಿರುವ ವ್ಯವಸ್ಥೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾನಾ ರೀತಿಯ ತಾಲೀಮು ನಡೆಸಿರುವ ಸಂಸ್ಕೃತಿ ಇಲಾಖೆ ಶಿಾರಸ್ಸು ಬಂದಿರುವ ಹೆಸರುಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಇಟ್ಟುಕೊಂಡಿದೆ. ಮತ್ತೊಂದೆಡೆ ಸಲಹಾ ಮಂಡಳಿ ಕಡೆಯಿಂದ ಬರಲಿರುವ ಪಟ್ಟಿಯನ್ನು ಸಿದ್ಧಗೊಳಿಸಿಕೊಳ್ಳಲು ವ್ಯವಸ್ಥೆ ಮಾಡಿದೆ. ಎಲ್ಲವನ್ನೂ ಸಮತೋಲನದಿಂದ ಅಳೆದು ಸುರಿದು ಆಯ್ಕೆ ಪ್ರಕ್ರಿಯೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಕಾಡೆಮಿ ಅಧ್ಯಕ್ಷ ಮತ್ತು ಸದಸ್ಯರ ನೇಮಕ ವಿಷಯಕ್ಕೆ ಸಂಬಂದಿಸಿದಂತೆ ಪ್ರಾದೇಶಿಕವಾಗಿ ಸಮತೋಲನ ಕಾಯ್ದುಕೊಳ್ಳಬೇಕು. ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಪಟ್ಟಿ ಆಗಬೇಕು ಎಂದು ಸಚಿವರು ತಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದು, ಈ ನಿಟ್ಟಿನಲ್ಲಿ ಕಸರತ್ತು ನಡೆಯುತ್ತಿದೆ.