ಸಾಗರ: ಇಂದಿನ ದಿನಗಳಲ್ಲಿ ಗಂಡು ಕಲೆ ಯಕ್ಷಗಾನವನ್ನು ಮಹಿಳೆಯರೂ ಕರಗತ ಮಾಡಿಕೊಳ್ಳಲು ಆಸಕ್ತಿ ತೋರಿ ಶ್ರಮ ಹಾಕಿ ಕಲಿಯುತ್ತಿರುವುದು ಅತ್ಯಂತ ಶ್ಲಾಘನೀಯ. ಕಲೆಯ ಬೆಳವಣಿಗೆಯಲ್ಲಿ ಈ ಸಾಧನೆ ದೊಡ್ಡ ಪಾತ್ರ ವಹಿಸಲಿದೆ ಎಂದು ಕಿಡದುಂಬೆಯ ನಾದಾನಂದ ಪ್ರತಿಷ್ಠಾನದ ಅಧ್ಯಕ್ಷ ಮಹಾಬಲೇಶ್ವರ ಭಟ್ ಅಭಿಪ್ರಾಯಪಟ್ಟರು.
ಸಾಗರ ತಾಲೂಕಿನ ಅರಳಗೋಡು ಕಂಚಿಕೈ ದೇವಸ್ಥಾನದ ಆವರಣದಲ್ಲಿ ಭಾನುವಾರ ಶ್ರೀ ಶನೈಶ್ಚರ ದೇವರ ಬ್ರಹ್ಮ ಕಲಶೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕಿಡದುಂಬೆಯ ನಾದಾನಂದ ಪ್ರತಿಷ್ಠಾನ ಆಯೋಜಿಸಿದ್ದ ಮಹಿಳಾ ತಂಡದ ಯಕ್ಷಗಾನ ತಾಳಮದ್ದಲೆ ಸುಧನ್ವಾರ್ಜುನ ಪ್ರಸಂಗಕ್ಕೆ ಚಾಲನೆ ನೀಡಿ ಮಾತನಾಡಿದರು. ಯಕ್ಷಗಾನ ಸಾಮಾನ್ಯ ಜನರ ಆಕರ್ಷಣೆಯ ಕಲೆಯಾದರೆ, ತಾಳಮದ್ದಲೆ ಬುದ್ದಿಜೀವಿಗಳನ್ನು ಆಕರ್ಷಿಸಬಲ್ಲ ಜ್ಞಾನ ಬುದ್ಧಿಯ ಕಲೆ. ಇದನ್ನು ಮಹಿಳೆಯರೂ ಸವಾಲು ಸ್ವೀಕರಿಸುವವರಂತೆ ಪ್ರಸ್ತುತಪಡಿಸಿ ಯಶಸ್ವಿಯಾಗುತ್ತಿದ್ದಾರೆ ಎಂದರು. ಲಕ್ಷ್ಮೀನಾರಾಯಣ ಸಂಪ, ಆದಿತ್ಯ ಬಣ್ಣುಮನೆ, ಮಮತಾ ಎಂ. ಭಟ್, ಮಂಗಳಗೌರಿ ಸಿ. ಭಟ್ ಇತರರಿದ್ದರು.