ಬೆಂಗಳೂರು: ಎಸಿಬಿ ಅಧಿಕಾರಿಗಳಿಂದ ಭ್ರಷ್ಟರ ಬೇಟೆ ಮುಂದುವರಿದಿದ್ದು, ಶನಿವಾರ ಬೆಳ್ಳಂಬೆಳಗ್ಗೆಯೇ ಕೆಎಎಸ್ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ಕಂಡು ಬಂದ ಅಪಾರ ಪ್ರಮಾಣದ ಚಿನ್ನಾಭರಣ, ಬಂಗಲೆಯಂಥ ಮನೆ ಎಸಿಬಿ ಅಧಿಕಾರಿಗಳನ್ನೇ ಅಚ್ಚರಿಗೊಳಪಡಿಸಿದೆ.
ಬೆಂಗಳೂರಿನ ಕೊಡಿಗೆಹಳ್ಳಿ ಬಳಿ ಇರುವ ಬಿಡಿಎ ಭೂಸ್ವಾಧೀನಾಧಿಕಾರಿ ಸುಧಾ ಅವರ ಮನೆ ‘ಆರಾಧನಾ’ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಮನೆಯೊಳಗೆ ಐಷಾರಾಮಿ ವ್ಯವಸ್ಥೆ ದರ್ಶನದ ಜತೆಗೆ ಭಾರಿ ಪ್ರಮಾಣದ ಚಿನ್ನಾಭರಣಗಳೂ ಪತ್ತೆಯಾಗಿವೆ.
ಸುಧಾ ಅವರ ಪತಿ ಸ್ಟ್ರೋನಿ ಪಾಯಸ್ ‘ಸುಧಾ ಕ್ರಿಯೇಷನ್ಸ್’ ಬ್ಯಾನರ್ನಡಿ ಚಿತ್ರ ನಿರ್ಮಾಣ ಮಾಡುತ್ತಿದ್ದುದಲ್ಲದೆ, ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ವ್ಯವಹಾರವನ್ನೂ ಇಟ್ಟುಕೊಂಡಿರುವುದು ತಿಳಿದುಬಂದಿದೆ. ಇವರು ‘ರಾಮನ ಸವಾರಿ’ ಎಂಬ ಕನ್ನಡ ಸಿನಿಮಾಗೆ ಬಂಡವಾಳ ಹೂಡಿದ್ದರು.
ಸುಧಾ ಮಾತ್ರವಲ್ಲದೆ ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ. ಮೈಸೂರಿನ ಬೆಮೆಲ್ ಲೇಔಟ್ನಲ್ಲಿರುವ ಸುಧಾ ಸಂಬಂಧಿಯ ನಿವಾಸದ ಮೇಲೆ ಬೆಂಗಳೂರಿನ ಎಸಿಬಿ ತಂಡ ದಾಳಿ ನಡೆಸಿದ್ದು, ಮೈಸೂರಿನ ಅಧಿಕಾರಿಗಳ ಸಹಕಾರದಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್)