ಮುರಗೋಡ: ಯರಗಟ್ಟಿ ಗ್ರಾಮದಿಂದ ಅಪಹರಣಕ್ಕೊಳಗಾಗಿ ಕೊಲೆಗೀಡಾದ ವ್ಯಕ್ತಿಯ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಮುರಗೋಡ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಗೋಕಾಕ ತಾಲೂಕಿನ ಮರಡಿ ಶಿವಾಪುರ ಗ್ರಾಮದ ಭೂತಪ್ಪ ನೀಲಪ್ಪ ದೂಡ್ಡಗಿರೆಣ್ಣರ (30) ಕೊಲೆಗೀಡಾದ ವ್ಯಕ್ತಿ. ರಾಮದುರ್ಗ ತಾಲೂಕಿನ ಎಂ.ಚಂದರಗಿ ಗ್ರಾಮದ ನಿಂಗಪ್ಪ ಕಲ್ಲಪ್ಪ ಸಾಲಹಳ್ಳಿ, ಗೋಕಾಕ ತಾಲೂಕಿನ ಮಮದಾಪುರ ಗ್ರಾಮದ ಶಿವಪ್ಪ ಕುರುಬಗಟ್ಟಿ ಬಂಧಿತರು.
ಮುಧೋಳ ತಾಲೂಕಿನ ಚಿಚಖಂಡಿ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ಶವ ಎಸೆಯಲಾಗಿತ್ತು. ಸವದತ್ತಿ ಸಿಪಿಐ ಮಂಜುನಾಥ ದೂಡಮನಿ, ಮುರಗೋಡ ಪಿಎಸ್ಐ ಪ್ರವೀಣ ಗಂಗೋಳಿ ಕಾರ್ಯಾಚರಣೆ ನಡೆಸಿದ್ದಾರೆ.
ಘಟನೆ ಹಿನ್ನೆಲೆ: ಕೊಲೆಯಾದ ಭೂತಪ್ಪ ಮರಡಿ ಶಿವಾಪುರ ಗ್ರಾಮದ ಯುವತಿಯೋರ್ವಳ ಜತೆ ಅನೈತಿಕ ಸಂಬಂಧ ಹೊಂದಿದ್ದ. ಯುವತಿಯೊಡನೆ ಸುತ್ತಾಡುವುದನ್ನು ಬಿಡುವಂತೆ ಆರೋಪಿತರು ಯುವಕನಿಗೆ ಎಚ್ಚರಿಕೆ ನೀಡಿದ್ದರು. ಆದರೂ ಭೂತಪ್ಪ ಮಾತು ತಲೆಗೆ ಹಾಕಿಕೊಂಡಿರಲಿಲ್ಲ. ಜು.1 ರಂದು ಯರಗಟ್ಟಿಯಿಂದ ಭೂತಪ್ಪನನ್ನು ಅಪಹರಣ ಮಾಡಿದ್ದರು. ಈ ಬಗ್ಗೆ ಕೊಲೆಯಾದ ಭೂತಪ್ಪನ ಸಹೋದರ ನೀಲಕಂಠ ಮುರಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದರು.