ರಾಣೆಬೆನ್ನೂರ: ನಗರದ ಬಿಎಸ್ಎನ್ಎಲ್ ಕಚೇರಿಯಲ್ಲಿ ಬಂದ್ ಆಗಿರುವ ಆಧಾರ್ ತಿದ್ದುಪಡಿ ಕೇಂದ್ರವನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಹುಲ್ಲತ್ತಿ ಗ್ರಾಮದ ವಂದೇ ಮಾತರಂ ಸೇವಾ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಕಚೇರಿ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಜಗದೀಶ ಕೆರೂಡಿ ಮಾತನಾಡಿ, ಹೆಚ್ಚಿನ ಹಣ ವಸೂಲಿ ಮಾಡಿದ ಆರೋಪದಿಂದ ಬಿಎಸ್ಎನ್ಎಲ್ ಕಚೇರಿಯಲ್ಲಿರುವ ಆಧಾರ್ ತಿದ್ದುಪಡಿ ಕೇಂದ್ರವನ್ನು ಎರಡು ತಿಂಗಳ ಹಿಂದೆಯೆ ಬಂದ್ ಮಾಡಲಾಗಿದೆ. ಆದರೆ, ಈಗಾಗಲೇ ಬೇರೆಯವರಿಗೆ ಟೆಂಡರ್ ನೀಡಿ ಪುನಃ ಆರಂಭಿಸಬೇಕಿದ್ದ ಅಧಿಕಾರಿಗಳು ಈವರೆಗೂ ಮಾಡಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರು ಪಡೆಯಬೇಕಾದರೆ ಆಧಾರ್ ಕಾರ್ಡ್ನಲ್ಲಿ ಯಾವುದೇ ಲೋಪದೋಷಗಳು ಕಂಡು ಬರಬಾರದು. ಆದ್ದರಿಂದ ಆಧಾರ್ ತಿದ್ದುಪಡೆ ಕೇಂದ್ರ ತೆರೆಯಲಾಗಿದೆ. ಆದರೆ, ನಗರದ ಆಧಾರ್ ತಿದ್ದುಪಡಿ ಕೇಂದ್ರ ಬಂದ್ ಆಗಿದ್ದರಿಂದ ಜನತೆ ದಾವಣಗೆರೆಗೆ ಹೋಗಿ ತಿದ್ದುಪಡಿ ಮಾಡಿಸಿಕೊಂಡು ಬರಬೇಕಾದ ದುಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
ಆದ್ದರಿಂದ ಅಧಿಕಾರಿಗಳು ಆಧಾರ್ ಕೇಂದ್ರ ಪುನಃ ಆರಂಭಿಸುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದರು. ಸ್ಥಳಕ್ಕೆ ಬಂದ ಬಿಎಸ್ಎನ್ಎಲ್ ಉಪ ವಿಭಾಗೀಯ ಇಂಜಿನಿಯರ್ ಹನುಮಂತಪ್ಪ ಪಾರ್ವತೇರ ಮಾತನಾಡಿ, ಆಧಾರ್ ತಿದ್ದುಪಡಿ ಕೇಂದ್ರ ಪುನಃ ಆರಂಭಿಸಲು ಟೆಂಡರ್ ಕರೆಯಲಾಗಿದೆ. 13 ಜನರು ಟೆಂಡರ್ ಹಾಕಿದ್ದಾರೆ. ನಿಯಮಾನೂಸಾರ ಟೆಂಡರ್ ನೀಡಿ ಶೀಘ್ರದಲ್ಲಿಯೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಪ್ರಮುಖರಾದ ಉಮೇಶ ಹೊನ್ನಾಳಿ, ಮಲ್ಲಪ್ಪ ಕಂಬಳಿ, ಉಮೇಶ ಬುರಲಿಂಗಪ್ಪನವರ, ವೆಂಕಟೇಶ ದೊಡ್ಡಮನಿ, ಗೋವಿಂದ ಲಮಾಣಿ, ಸುಭಾಸ ಲಮಾಣಿ, ಗೋವಿಂದ ಕೊಟ್ಟೂರು, ಅಜ್ಜಪ್ಪ ನಾಯಕ, ಯಲ್ಲಪ್ಪ ಚಿಕ್ಕಣ್ಣನವರ, ಸುರೇಶ ಕೆರೂಡಿ, ಫಕ್ಕೀರಪ್ಪ ದೊಡ್ಡಮನಿ, ಮಾಂತೇಶ ವಡ್ಡರ, ರಾಜು ಓಲೇಕಾರ, ಬಸಣ್ಣ ಹೊನ್ನಾಳಿ ಮತ್ತಿತರರು ಪಾಲ್ಗೊಂಡಿದ್ದರು.