ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದ ದಯಾಳ್ ಪದ್ಮನಾಭನ್ ನಿರ್ದೇಶನದ ‘ಆ ಕರಾಳ ರಾತ್ರಿ’ ಚಿತ್ರವು ಇದೀಗ ತೆಲುಗಿಗೆ ರೀಮೇಕ್ ಆಗುವುದಕ್ಕೆ ಸಜ್ಜಾಗಿದೆ. ಈ ಚಿತ್ರವನ್ನು ದಯಾಳ್ ಅವರೇ ತೆಲುಗಿನಲ್ಲಿ ನಿರ್ದೇಶನ ಮಾಡಲಿದ್ದಾರೆ ಎನ್ನುವುದು ವಿಶೇಷ.
‘ಆ ಕರಾಳ ರಾತ್ರಿ’ ಚಿತ್ರವನ್ನು ತೆಲುಗಿನಲ್ಲಿ ನಿರ್ಮಿಸುತ್ತಿರುವುದು ತೆಲುಗಿನ ಜನಪ್ರಿಯ ನಿರ್ಮಾಪಕ ಅಲ್ಲು ಅರವಿಂದ್. ತಮ್ಮ ಗೀತಾ ಆರ್ಟ್ಸ್ ಸಂಸ್ಥೆಯ ಮೂಲಕ ತೆಲುಗಿನಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಅವರು, ಇದೀಗ ತಮ್ಮ ಮಗ ಅಲ್ಲು ಅರ್ಜುನ್ ಜತೆಗೆ ಸೇರಿಕೊಂಡು, ಆಹಾ ಎಂಬ ಓಟಿಟಿ ಶುರು ಮಾಡಿದ್ದಾರೆ. ಈಗಾಗಲೇ ಆ ಓಟಿಟಿಗಾಗಿ ಹಲವು ಚಿತ್ರ ಮತ್ತು ವೆಬ್ಸೀರೀಸ್ಗಳನ್ನು ನಿರ್ಮಿಸುತ್ತಿರುವ ಅವರು, ‘ಆ ಕರಾಳ ರಾತ್ರಿ’ ಚಿತ್ರವನ್ನು ತೆಲುಗಿನಲ್ಲಿ ರೀಮೇಕ್ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಈಗಾಗಲೇ ಮಾತುಕತೆಯಾಗಿದ್ದು, ಲಾಕ್ಡೌನ್ ಮುಗಿದ ನಂತರ ಚಿತ್ರದ ಕೆಲಸಗಳು ಶುರುವಾಗುವ ನಿರೀಕ್ಷೆ ಇದೆ.
ಅಂದ ಹಾಗೆ, ಈ ಚಿತ್ರದಲ್ಲಿ ಯಾರೆಲ್ಲಾ ನಟಿಸಬಹುದು ಎಂಬ ಪ್ರಶ್ನೆ ಬರುವುದು ಸಹಜವಾ. ನಾಯಕಿಯ ಪಾತ್ರಕ್ಕೆ ಅಮಲಾ ಪೌಲ್, ತ್ರಿಷಾ ಕೃಷ್ಣನ್ ಮತ್ತು ಶ್ರುತಿ ಹಾಸನ್ ಅವರಿಗೆ ಅಪ್ರೋಚ್ ಮಾಡಿದ್ದಾರಂತೆ ದಯಾಳ್. ಈ ಪೈಕಿ ಒಬ್ಬರು ನಾಯಕಿಯಾಗುವ ಸಾಧ್ಯತೆ ಇದೆ. ಇನ್ನು ವೀಣಾ ಸುಂದರ್ ಅವರ ಪಾತ್ರಕ್ಕೆ ರಾಧಿಕಾ ಶರತ್ ಕುಮಾರ್ ಮತ್ತು ರಂಗಾಯಣ ರಘು ಪಾತ್ರಕ್ಕೆ ಸಾಯಿಕುಮಾರ್ ಅವರನ್ನು ಸಂಪರ್ಕಿಸಲಾಗಿದೆ. ಕಥೆ ಮೆಚ್ಚಿಕೊಂಡಿರುವ ರಾಧಿಕಾ ಮತ್ತು ಸಾಯಿಕುಮಾರ್ ಚಿತ್ರದಲ್ಲಿ ನಟಿಸುವ ಸಾಧ್ಯತೆ ಹೆಚ್ಚಿದೆ. ಲಾಕ್ಡೌನ್ ಮುಗಿದ ನಂತರ ಮಾತುಕತೆ ಪೂರ್ಣವಾಗಿ, ಆ ನಂತರವಷ್ಟೇ ಎಲ್ಲವೂ ಪಕ್ಕಾ ಆಗಲಿದೆ.
ಇನ್ನು ಲಾಕ್ಡೌನ್ ಸಮಯವನ್ನು ಬರೆಯುವುದಕ್ಕೆ ಮೀಸಲಿಟ್ಟಿರುವ ದಯಾಳ್, ಈ ಸಮಯದಲ್ಲಿ ಎರಡು ಕಥೆಗಳನ್ನು ಬರೆದಿಟ್ಟುಕೊಂಡಿದ್ದಾರಂತೆ. ಒಂದು ‘ಮಾರುತಿನಗರ್ ಪೊಲೀಸ್ ಸ್ಟೇಶನ್’. ಇನ್ನೊಂದು ‘ಮಾಯಾವತಿ’. ‘ಎರಡು ಸ್ಕ್ರಿಪ್ಟ್ ಮಾಡಿಟ್ಟುಕೊಂಡಿದ್ದೇನೆ. ಎಲ್ಲವೂ ರೆಡಿಯಾಗಿದ್ದರೆ, ಲಾಕ್ಡೌನ್ ಮುಗಿದ ನಂತರ ಚಿತ್ರೀಕರಣ ಶುರು ಮಾಡುಬಹುದು’ ಎನ್ನುತ್ತಾರೆ ದಯಾಳ್.