ಬೆಂಗಳೂರು: ಅಪ್ರಾಪ್ತೆಗೆ ಬೆದರಿಸಿ ಮದುವೆಯಾಗಿದ್ದ ಯುವಕನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ 3ನೇ ಎ್ಟಿಎಸ್ಸಿ ನ್ಯಾಯಾಲಯ ತೀರ್ಪು ನೀಡಿದೆ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ವೆಂಕಟೇಶ್ ಅಲಿಯಾಸ್ ವೆಂಕಿ ಅಪರಾಧಿ. ಚೆನ್ನಮ್ಮನಕೆರೆ ಅಚ್ಚುಕಟ್ಟು ಸಮೀಪದಲ್ಲಿ ನೆಲೆಸಿದ್ದ ಅಪ್ರಾಪ್ತೆಗೆ ‘ನಿನ್ನನ್ನು ಮದುವೆ ಆಗಬೇಕು. ಇಲ್ಲವಾದರೆ, ನಿನ್ನ ಪಾಲಕರನ್ನು ಕೊಲೆ ಮಾಡುತ್ತೇನೆ’ ಎಂದು ಬೆದರಿಸಿದ್ದ. 2021ರ ಆ. 31ರಂದು ಅಪ್ರಾಪ್ತೆಯನ್ನು ಪುಸಲಾಯಿಸಿ ಆಂಧ್ರಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ.
ಈ ಬಗ್ಗೆ ಚನ್ನಮ್ಮನಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವೆಂಕಟೇಶ್ನನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದರು. ಕೋರ್ಟ್ನಲ್ಲಿ ಷರತ್ತುಬದ್ದ ಜಾಮೀನು ಪಡೆದು ಹೊರಬಂದ ಆತ, 2022ರ ಏಪ್ರಿಲ್ 16ರಂದು ಸಂತ್ರಸ್ತೆ ಬೆನ್ನತ್ತಿದ್ದ. ಇಬ್ಬರು ಓಡಿ ಹೋಗಿ ಮದುವೆ ಆದರೆ ನನ್ನ ಮೇಲಿನ ಪೋಕ್ಸೋ ಕೇಸ್ ರದ್ದಾಗಲಿದೆ ಎಂದು ಒತ್ತಾಯ ಮಾಡಿದ್ದ.
ಒಪ್ಪಿಕೊಂಡ ಸಂತ್ರಸ್ತೆಯನ್ನು ಆಂಧ್ರಕ್ಕೆ ಕರೆದೊಯ್ದು ದೇವಸ್ಥಾನದಲ್ಲಿ ಮದುವೆಯಾಗಿದ್ದ. ನಂತರ ತಿರುಪತಿಯ ಚಂದ್ರಗಿರಿ ಮಂಡಲ ಪಾಕಲ್ನಲ್ಲಿ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದ. ತನಿಖೆ ಕೈಗೊಂಡ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು, ವೆಂಕಟೇಶ್ನನ್ನು ಪತ್ತೆಹಚ್ಚಿ ಕೋರ್ಟ್ಗೆ ಹಾಜರುಪಡಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ರಾಮಕೃಷ್ಣ ಗೊರವರ, ಸಂತ್ರಸ್ತೆ ಪರವಾಗಿ ವಾದ ಮಂಡಿಸಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಇಷ್ರತ್ ಜಹಾನ್ ಅರ ಅವರು, ವೆಂಕಟೇಶ್ಗೆ 10 ವರ್ಷ ಜೈಲುಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಂತ್ರಸ್ತೆಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿದರು.