ಅಂಕೋಲಾ: ಮನೆಗೆ ಸಿಡಿಲು ಬಡಿದು ಮಹಿಳೆಯೊಬ್ಬಳು ಅಸ್ವಸ್ಥಗೊಂಡ ಘಟನೆ ತಾಲೂಕಿನ ಅಗಸೂರಿನ ಹಿತ್ತಲಗದ್ದೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಅಗಸೂರಿನ ಹಿತ್ತಲಗದ್ದೆಯ ನಿವಾಸಿ ರಂಜಿತಾ ಜಗದೀಶ ಗೌಡ ಸಿಡಿಲಿನ ಆಘಾತಕ್ಕೆ ಒಳಗಾದ ಮಹಿಳೆ. ಅವರನ್ನು ಕೂಡಲೇ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಸೋಮವಾರ ಸಂಜೆ 7.30ರ ಸುಮಾರಿಗೆ ಇದ್ದಕ್ಕಿದ್ದಂತೆ ಗುಡುಗು-ಸಿಡಿಲು ಸಹಿತ ಮಳೆ ಸುರಿಯತೊಡಗಿದ್ದು, ಅದೇ ವೇಳೆ ಒಂದೂವರೆ ತಿಂಗಳ ಹಸುಗೊಸಿನೊಂದಿಗೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಮನೆಗೆ ಸಿಡಿಲು ಬಡಿದಿದೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಸಿಡಿಲಿನ ಆಘಾತಕ್ಕೆ ರಂಜಿತಾ ಅಸ್ವಸ್ಥಗೊಂಡಿದ್ದಾಳೆ.
ಸಿಡಿಲಿಗೆ ಮನೆಯ ಗೋಡೆಯೂ ಬಿರುಕು ಬಿಟ್ಟಿದ್ದು, ವಿದ್ಯುತ್ ಉಪಕರಣಗಳು, ಟಿವಿ ಮುಂತಾದವುಗಳಿಗೆ ಹಾನಿಯಾಗಿದೆ. ಕಂದಾಯ ನಿರೀಕ್ಷಕ ಭಾರ್ಗವ ನಾಯಕ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತಹಸೀಲ್ದಾರ್ ಅಶೋಕ ಎನ್.ಭಟ್ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ ನಾಯ್ಕ, ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಂತೋಷಕುಮಾರ, ಡಾ. ಅನುಪಮಾ ನಾಯಕ, ತರಬೇತಿ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಹಾಜರಿದ್ದರು.